ತಮಿಳುನಾಡು, ಅ 10 (DaijiworldNews/DB): ಏಕ ರಾಷ್ಟ್ರ, ಏಕ ಭಾಷೆ, ಏಕ ಧರ್ಮ, ಏಕ ಆಹಾರ, ಏಕ ಸಂಸ್ಕೃತಿ ನೀತಿ ಜಾರಿಗೊಳಿಸುವ ಮೂಲಕ ಭಾರತೀಯ ಒಕ್ಕೂಟ ವ್ಯವಸ್ಥೆಗೆ ಬಿಜೆಪಿ ಹಾನಿ ಉಂಟು ಮಾಡುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡಿದ ಅಧಿಕೃತ ಭಾಷೆಯ ಸಂಸತ್ ಸಮಿತಿಯ ವರದಿ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು, ಐಐಟಿ, ಐಐಎಂ ಮತ್ತು ಕೇಂದ್ರೀಯ ವಿವಿಗಳಲ್ಲಿ ಬೋಧನಾ ಮಾಧ್ಯಮವಾಗಿ ಹಿಂದಿಯನ್ನು ಈ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಆದರೆ ಹಿಂದಿ ಕಡ್ಡಾಯಗೊಳಿಸಿ ಮತ್ತೊಂದು ಭಾಷಾ ಯುದ್ದಕ್ಕೆ ಆಹ್ವಾನ ನೀಡದಿರಿ ಎಂದು ಎಚ್ಚರಿಸಿದರು.
ಜನರು ಈಗಾಗಲೇ 22 ಅಧಿಕೃತ ಭಾಷೆಗಳಿಗೆ ಇನ್ನೂ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಹೀಗಿರುವಾಗ ಇಂತಹ ಶಿಫಾರಸ್ಸುಗಳ ಔಚಿತ್ಯವೇನು ಎಂದು ಪ್ರಶ್ನಿಸಿದ ಅವರು, ಇಂತಹ ಕ್ರಮಗಳು ಸಂವಿಧಾನಕ್ಕೆ ವಿರುದ್ದವಾದುದು ಎಂದಿದ್ದಾರೆ.
ಹಿಂದಿ ದಿವಸ್ ಆಚರಣೆ ಮಾಡಿದ ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ಅಧಿಕೃತ ಭಾಷೆ ಎಂಬುದಾಗಿ ಹೇಳಿದ್ದರು. ಇದೀಗ ಅವರ ನೇತೃತ್ವದ ಸಮಿತಿಯು ಶಿಕ್ಷಣ ಸಂಸ್ಥೆಗಳ ಮೇಲೆ ಹಿಂದಿ ಹೇರಿಕೆ ಮಾಡಲು ಪ್ರಯತ್ನ ನಡೆಸುತ್ತಿದೆ. ಹಿಂದಿ ಭಾಷೆಯನ್ನು ಪ್ರಥಮ ದರ್ಜೆಯ ನಾಗರಿಕರೆಂದೂ, ಹಿಂದಿಯೇತರರನ್ನು ದ್ವಿತೀಯ ದರ್ಜೆ ನಾಗರಿಕರೆಂದು ಕರೆಯುವುದನ್ನು ಜನ ಒಪ್ಪುವುದಿಲ್ಲ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಇಲ್ಲಿ ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣಬೇಕು ಎಂದು ಸ್ಟಾಲಿನ್ ಪ್ರತಿಪಾದಿಸಿದರು.
ಅಧಿಕೃತ ಭಾಷೆಯನ್ನಾಗಿ ಎಲ್ಲಾ ಭಾಷೆಗಳನ್ನು ಮಾಡಬೇಕು. ಮಾತೃಭಾಷಾ ಭಾವನೆಯ ಬೆಂಕಿ ಹಚ್ಚಲು ಪ್ರಯತ್ನ ಮಾಡಬೇಡಿ. ಹಿಂದಿ ಹೇರಿಕೆ ಮಾಡಿ ಇನ್ನೊಂದು ಭಾಷಾ ಯುದ್ದ ನಡೆಸುವ ಪ್ರಯತ್ನಕ್ಕೆ ಕೈ ಹಾಕಬೇಡಿ ಎಂದವರು ಇದೇ ವೇಳೆ ಬಿಜೆಪಿಗೆ ಎಚ್ಚರಿಸಿದರು.