ದಾವಣಗೆರೆ, ಅ 10 (DaijiworldNews/DB): ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿಯಂತೆ ದೇಶವನ್ನು ಕೊಳ್ಳೆ ಹೊಡೆದು ಒಡೆದಾಳುವ ನೀತಿಯನ್ನು ಬಿಜೆಪಿ ಮುಂದುವರಿಸುತ್ತಿದೆ. ಆ ಮೂಲಕ ಬಿಜೆಪಿ ಹೊಸ ಈಸ್ಟ್ ಇಂಡಿಯಾ ಕಂಪನಿಯಂತಾಗಿದೆ ಎಂದು ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರು ಆರಂಭಿಸಿದ್ದ ಈಸ್ಟ್ ಇಂಡಿಯಾ ಕಂಪನಿಯು ದೇಶವನ್ನು ಕೊಳ್ಳೆ ಹೊಡೆಯಲು ಒಡೆದು ಆಳುವ ನೀತಿ ಅನುಸರಿಸಿತ್ತು.ಈಗ ಅದೇ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದ್ವೇಷ ಬಿತ್ತುವುದು, ಒಡೆದಾಳುವುದು ಆ ಪಕ್ಷದ ನೀತಿಯಾಗಿದೆ ಎಂದು ಆಪಾದಿಸಿದರು.
ಮುಸ್ಲಿಂ ಸಮುದಾಯ ಇರುವ ಜಾಗದಲ್ಲಿ ಹಿಂದು-ಮುಸ್ಲಿಂರ ನಡುವೆ ಒಡಕು ಮೂಡಿಸುವುದು, ಅವರು ಇಲ್ಲದ ಜಾಗದಲ್ಲಿ ಜಾತಿಗಳ ನಡುವೆ ಒಡಕು ಮೂಡಿಸಯವುದು ಅವರ ಕೆಲಸವಾಗಿದೆ. ಬಡವರ ಹಣವನ್ನು ದೋಚಿ ಸಿರಿವಂತರಿಗೆ ನೀಡುವುದು ಆ ಪಕ್ಷದ ಆರ್ಥಿಕ ನೀತಿ ಎಂದು ಕಿಡಿ ಕಾರಿದರು.
ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಬಂದ ಅವಧಿಯಲ್ಲೇ ಜಾರಿ ನಿರ್ದೇಶನಾಲಯವು ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರಿಗೆ ಮೂರು ಬಾರಿ ನೋಟಿಸ್ ನೀಡಿರುವುದು ಯಾತ್ರೆಯಿಂದ ಬಿಜೆಪಿ ಭಯಗೊಂಡಿರುವುದಕ್ಕೆ ಸಾಕ್ಷಿ ಎಂದರು.