ಲಖನೌ, ಅ 10 (DaijiworldNews/DB): ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವದ ಪ್ರಮುಖ ಸೇನಾನಿಯಾಗಿ ಮುಲಾಯಂ ಸಿಂಗ್ ಮುಖ್ಯವಾಹಿನಿಯಲ್ಲಿದ್ದರು ಎಂದು ಮೋದಿ ಬಣ್ಣಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಅಸಾಧಾರಣ ವ್ಯಕ್ತಿತ್ವದ ಮುಲಾಯಂ ಅವರದ್ದು ಜನರ ಸಮಸ್ಯೆಗಳಿಗೆ ಬಹುಬೇಗ ಸ್ಪಂದಿಸುವ ಗುಣ. ವಿನಮ್ರ ಹಾಗೂ ತಳಮಟ್ಟದ ನಾಯಕರಾಗಿ ಜನ ಮೆಚ್ಚುಗೆ ಗಳಿಸಿದ್ದರು. ಅವರ ಜನಸೇವೆಯಲ್ಲಿ ಶ್ರದ್ದೆ, ಸಂವೇದನಾಶೀಲತೆ ಮಿಳಿತವಾಗಿತ್ತು. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಮತ್ತು ಡಾ.ಲೋಹಿಯಾ ಅವರ ವಿಚಾರಧಾರೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಿದ ಧೀಮಂತ ನಾಯಕ ಎಂದಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡ ಮೇರು ವ್ಯಕ್ತಿತ್ವ ಮುಲಾಯಂರದ್ದು. ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವದ ಪ್ರಮುಖ ಸೇನಾನಿಯಾಗಿ ಮುಲಾಯಂ ಸಿಂಗ್ ಮುಖ್ಯವಾಹಿನಿಯಲ್ಲಿದ್ದರು. ರಕ್ಷಣಾ ಸಚಿವರಾಗಿ ಭಾರತವನ್ನು ಬಲಿಷ್ಠಗೊಳಿಸಿದ್ದಾರೆ ಎಂದು ಪ್ರಧಾನಿ ಸ್ಮರಿಸಿದ್ದಾರೆ.
ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಮುಲಾಯಂ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರ ಸಾವು ದೇಶಕ್ಕೆ ತುಂಬಲಾರದ ನಷ್ಟ. ಸಾಧಾರಣ ಪರಿಸ್ಥಿತಿಯಿಂದ ರಾಜಕೀಯಕ್ಕೆ ಬಂದು ಅಸಾಧಾರಣ ಸಾಧನೆಗಳ ಮೂಲಕ ಜನಾನುರಾಗಿಯಾಗಿದ್ದರು. ಅವರೊಬ್ಬ ಭೂಮಿಪುತ್ರ, ಸರ್ವಪಕ್ಷಗಳ ಮುಖಂಡರ ಗೌರವಕ್ಕೂ ಪಾತ್ರರಾಗಿದ್ದರು ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.