ಜೈಪುರ, ಅ 10 (DaijiworldNews/DB): ಕಾಲುಂಗುರ ಕದಿಯುವ ಸಲುವಾಗಿ ಕಳ್ಳರ ಗುಂಪೊಂದು ಶತಾಯುಷಿ ವೃದ್ದೆಯ ಪಾದವನ್ನೇ ಕತ್ತರಿಸಿದ ಘಟನೆ ಜೈಪುರದಲ್ಲಿ ನಡೆದಿದೆ.
108 ವರ್ಷ ವಯಸ್ಸಿನ ಜಮುನಾ ದೇವಿ ಎಂಬ ವೃದ್ದೆಯನ್ನು ರವಿವಾರ ಮುಂಜಾನೆ ಕಳ್ಳರ ಗುಂಪು ಮನೆಯಿಂದ ಹೊರಗೆ ಎಳೆದು ಹಾಕಿದೆ. ಬಳಿಕ ಹರಿತವಾದ ಆಯುಧಗಳಿಂದ ಆಕೆಯ ಪಾದವನ್ನು ಕತ್ತರಿಸಿ ಹಾಕಿ ಕಾಲುಂಗುರ ಕಿತ್ತುಕೊಂಡು ಪರಾರಿಯಾಗಿದೆ. ಮನೆಯ ಹೊರಗಿದ್ದ ಬಾತ್ರೂಂನಲ್ಲಿ ರಕ್ತದ ಮಡುವಿನಲ್ಲಿ ವೃದ್ದೆ ಬಿದ್ದಿದ್ದು, ವೃದ್ದೆಯ ನರಳಾಟ ಕೇಳಿ ಮಗಳು ಹೊರಗೋಡಿ ಬಂದಾಗ ವಿಷಯ ಗೊತ್ತಾಗಿದೆ. ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಗಲ್ಟಾ ಗೇಟ್ ಪೊಲೀಸ್ ಠಾಣಾಧಿಕಾರಿ ಮಖೇಶ್ ಕುಮಾರ್ ತಿಳಿಸಿರುವುದಾಗಿ ವರದಿಯಾಗಿದೆ.
ಸಂತ್ರಸ್ತೆಯ ಪುತ್ರಿ ಗೋವಿಂದಿ ದೇವಿ (45) ಹೇಳುವ ಪ್ರಕಾರ, ಮುಂಜಾನೆ ಸುಮಾರು ಐದು ಗಂಟೆ ವೇಳೆಗೆ ಎಲ್ಲರೂ ನಿದ್ರೆಯಲ್ಲಿದ್ದಾಗ ತಾಯಿಯನ್ನು ಕಳ್ಳರು ಎಳೆದೊಯ್ದಿದ್ದಾರೆ. ಅವರಿಗೆ ವಯಸ್ಸಿನ ಕಾರಣದಿಂದಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆರು ಗಂಟೆಗೆ ಅಜ್ಜಿ ಹಾಸಿಗೆಯಲ್ಲಿ ಇಲ್ಲದಿರುವುದು ಮಮತಾ ಎಂಬವರ ಗಮನಕ್ಕೆ ಬಂದಿತ್ತು. ಅಲ್ಲದೆ ಹೊರಗಿನಿಂದ ನರಳಾಟದ ಧ್ವನಿ ಕೇಳಿಸಿತ್ತು. ಹೊರ ಬಂದು ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಪಾದ ಕತ್ತರಿಸಿದ ಸ್ಥಿತಿಯಲ್ಲಿತ್ತು. ಕಾಲುಂಗುರ ಕಾಲಿನಲ್ಲಿ ಇರಲಿಲ್ಲ ಎಂದು ವಿವರಿಸಿದ್ದಾರೆ.