ಮುಂಬೈ, ಅ 10 (DaijiworldNews/DB): ನನ್ನನ್ನು ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಗಾಂಧಿ ಕುಟುಂಬ ಆಶೀರ್ವದಿಸಿದೆ. ಯಾವುದೇ ಪಕ್ಷಪಾತವನ್ನು ಇಬ್ಬರಲ್ಲೂ ಮಾಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಶಶಿ ತರೂರ್ ಹೇಳಿದ್ದಾರೆ.
ಮುಂಬೈನಲ್ಲಿರುವ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ್ನು ಮುಂದಿನ ಸಾರ್ವತ್ರಿಕ ಚುನಾವಣೆಗೂ ಮೊದಲು ಬಲಿಷ್ಠಗೊಳಿಸುವುದೇ ನನ್ನ ಮೊದಲ ಆದ್ಯತೆ. ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ತನ್ನನ್ನು ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗಾಂಧಿ ಕುಟುಂಬ ಆಶೀರ್ವದಿಸಿದೆ. ನಮ್ಮ ಸ್ಪರ್ಧೆ ಯಾವುದೇ ವೈಯಕ್ತಿಕ ವರ್ಚಸ್ಸು ಗಳಿಸುವುದಕ್ಕೆ ಅಲ್ಲ. ಪಕ್ಷ ಬಲವರ್ಧನೆಯ ಆಶೋತ್ತರದೊಂದಿಗೆ ಇಬ್ಬರೂ ಸ್ಪರ್ಧಿಸುತ್ತಿದ್ದೇವೆ. ಗಾಂಧಿ ಕುಟುಂಬ ಇಬ್ಬರ ವಿಚಾರದಲ್ಲಿಯೂ ಪಕ್ಷಪಾತ ಮಾಡಿಲ್ಲ ಎಂದರು.
2024 ಚುನಾವಣೆಯ ನಂತರ ಬಿಜೆಪಿ ವಿರೋಧ ಪಕ್ಷವಾಗಿರಬೇಕು. ಅದಕ್ಕಾಗಿ ಈಗಿಂದಲೇ ನಮ್ಮ ತಯಾರಿ ಶುರುವಾಗಲಿದೆ. ಪಕ್ಷಕ್ಕೆ ಬದಲಾವಣೆಯ ಅಗತ್ಯವಿದ್ದು, ಅದರ ವೇಗವರ್ಧಕ ನಾನೇ ಎಂದು ಭಾವಿಸುತ್ತೇನೆ. ಅನುಭವಿ ನಾಯಕರುಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ದೇಶವನ್ನು ಅಚ್ಚುಕಟ್ಟಾಗಿಯೇ ನಡೆಸಿದೆ ಎಂದವರು ತಿಳಿಸಿದರು.