ನವದೆಹಲಿ, ಅ 09 (DaijiworldNews/DB): ಪಕ್ಷದ ವಿಚಾರವಾಗಿ ಮೂರು ಹೆಸರು ಮತ್ತು ಚಿಹ್ನೆಗಳ ಪಟ್ಟಿಯನ್ನು ನೀಡುವಂತೆ ಉದ್ದವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಕ್ಕೆ ಚುನಾವಣಾ ಆಯೋಗ ಸೂಚಿಸಿದ್ದ ಹಿನ್ನೆಲೆಯಲ್ಲಿ ಉದ್ದವ್ ಠಾಕ್ರೆ ಅವರು ಆಯ್ಕೆಗಳನ್ನು ನೀಡಿದ್ದಾರೆ.
ಮುಂಬೈನ ಅಂಧೇರಿ ಪೂರ್ವದಲ್ಲಿ ನಡೆಯಲಿರುವ ಉಪ ಚುನಾವಣೆಗೆ ಶಿವಸೇನೆಯ ಉದ್ಧವ್ ಠಾಕ್ರೆ ಬಣವು ಎರಡು ಹೆಸರುಗಳನ್ನು ಸೂಚಿಸಿದೆ. ಮೊದಲ ಆಯ್ಕೆಯ ಹೆಸರು ‘ಶಿವಸೇನಾ ಬಾಳಾಸಾಹೇಬ್ ಠಾಕ್ರೆ’ ಮತ್ತು ಎರಡನೇ ಆಯ್ಕೆಯಾಗಿ ‘ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಎಂಬ ಹೆಸರುಗಳನ್ನು ಸೂಚಿಸಿದ್ದಾರೆ. ಇನ್ನು ಕ್ರಮವಾಗಿ ತ್ರಿಶೂಲ ಮತ್ತು ಸೂರ್ಯೋದಯದ ಚಿತ್ರಗಳನ್ನು ಚಿಹ್ನೆಯಾಗಿ ನೀಡಿದೆ.
1989ರಲ್ಲಿ ಶಿವಸೇನೆಯು ಬಿಲ್ಲು ಮತ್ತು ಬಾಣವನ್ನು ಚಿಹ್ನೆಯಾಗಿ ಪಡೆದುಕೊಂಡಿತ್ತು. ಆದರೆ ಇದೀಗ ಶಿವಸೇನೆಯಲ್ಲಿ ಏಕನಾಥ ಶಿಂಧೆ ಬಣ ಮತ್ತು ಉದ್ದವ್ ಠಾಕ್ರೆ ಬಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಶಿವಸೇನೆ ಹೆಸರು ಮತ್ತು ಅದರ ಚಿಹ್ನೆಯನ್ನು ಚುನಾವಣಾ ಆಯೋಗವು ಸ್ಥಗಿತಗೊಳಿಸಿತ್ತು. ಅಲ್ಲದೆ ಹೊಸ ಹೆಸರು ಮತ್ತು ಚಿಹ್ನೆಗಳ ಪಟ್ಟಿಯನ್ನು ಕಳುಹಿಸಿಕೊಡುವಂತೆ ಸೂಚಿಸಿತ್ತು.
ಉಭಯ ನಾಯಕರು ಇಂದು ತಮ್ಮ ಪಕ್ಷದ ನಾಯಕರೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಉದ್ಧವ್ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಸಿದ್ದಾರೆ. ಇನ್ನು ಏಕನಾಥ್ ಶಿಂಧೆ ಸಂಜೆ 7 ಗಂಟೆಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.