ಭಿಂಡ್, ಅ 09 (DaijiworldNews/DB): ಗಾಯಾಳು ವ್ಯಕ್ತಿಯ ಕಾಲಿಗೆ ರಟ್ಟಿನಿಂದ ಬ್ಯಾಂಡೇಜ್ ಹಾಕಿದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ರೋನ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಡೆದಿದೆ. ವೈದ್ಯಕೀಯ ಸಿಬಂದಿಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಅಪಘಾತದಲ್ಲಿ ಕಾಲು ಮುರಿತಕ್ಕೊಳಗಾದ ವ್ಯಕ್ತಿಯನ್ನು ರೋನ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿ ತಾತ್ಕಾಲಿಕ ಬ್ಯಾಂಡೇಜ್ ರೂಪದಲ್ಲಿ ಕಾರ್ಡ್ ಬೋರ್ಡ್ ಬಳಸಿದ್ದರು. ಬಳಿಕ ವ್ಯಕ್ತಿಯನ್ನು ಸಂಬಂಧಿಕರು ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಆದರೆ ಜಿಲ್ಲಾಸ್ಪತ್ರೆಯ ವೈದ್ಯರು ಡ್ರೆಸ್ಸಿಂಗ್ ಬದಲಾಯಿಸಿದಾಗ ಗಾಯಾಳುವಿನ ಕಾಲಿಗೆ ಕಾರ್ಡ್ ಬೋರ್ಡ್ ಕಟ್ಟಿ ಬ್ಯಾಂಡೇಜ್ ಮಾಡಿರುವುದು ಗೊತ್ತಾಗಿದೆ. ಬ್ಯಾಂಡೇಜ್ಗೆ ಬೇಕಾದ ಪ್ಲಾಸ್ಟರ್ ಆಫ್ ಪ್ಯಾರೀಸ್ ಅಲಭ್ಯತೆಯಿಂದಾಗಿ ರಟ್ಟು ಬಳಸಿ ವೈದ್ಯರು ಬ್ಯಾಂಡೇಜ್ ಸುತ್ತಿರುವುದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಅಧಿಕಾರಿಯೊಬ್ಬರು, ರೋಗಿಯ ಕಾಲಿನಿಂದಾಗುವ ರಕ್ತಸ್ರಾವ ನಿಲ್ಲಿಸುವುದು ಸಿಬಂದಿಯ ಉದ್ದೇಶವಾಗಿತ್ತು. ಹೀಗಾಗಿ ಅವರು ಕಾರ್ಡ್ ಬೋರ್ಡ್ ಬಳಸಿ ಕಟ್ಟಿದ್ದಾರೆ. ಅಲ್ಲದೆ ಕೂಡಲೇ ರೋಗಿಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ ಎಂದಿದ್ದಾರೆ ಎಂದು ತಿಳಿದು ಬಂದಿದೆ.