ಉತ್ತರಪ್ರದೇಶ, ಅ 09 (DaijiworldNews/DB): ರಾಹುಲ್ ಎಂದರೆ ಭಾರತ, ಭಾರತ ಎಂದರೆ ರಾಹುಲ್ ಎನ್ನುವ ಮೂಲಕ ಉತ್ತರ ಪ್ರದೇಶ ಕಾಂಗ್ರೆಸ್ನ ನೂತನ ಮುಖ್ಯಸ್ಥ ಬ್ರಿಜ್ಲಾಲ್ ಖಬ್ರಿ ಅವರು ರಾಹುಲ್ ಗಾಂಧಿಯವರನ್ನು ಬಣ್ಣಿಸಿದ್ದಾರೆ.
ಭಾಾರತ್ ಜೋಡೋʼ ಯಾತ್ರೆಯ ಬಗ್ಗೆ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶ ಮತ್ತು ಸಂವಿಧಾನವನ್ನು ಉಳಿಸುವುದೇ ರಾಹುಲ್ ಗಾಂಧಿಯವರ ಮುಖ್ಯ ಗುರಿಯಾಗಿದೆ. ’ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ’ ಎಂಬುದಾಗಿ ಈ ಹಿಂದೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇವ್ ಕಾಂತ್ ಬರೂಹ್ ಹೇಳಿದ್ದರು. ರಾಹುಲ್ ವಿಚಾರದಲ್ಲಿ ಆ ಸಾಲುಗಳನ್ನು ಮತ್ತೆ ನೆನಪಿಸುವ ಅವಶ್ಯವಿದೆ ಎಂದರು.
ಉತ್ತರ ಪ್ರದೇಶದ ಒಂದು ಜಿಲ್ಲೆಯಲ್ಲಿ ಮಾತ್ರ ಭಾರತ್ ಜೋಡೋ ಯಾತ್ರೆ ಸಾಗುವ ಉದ್ದೇಶವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭಾರತ ಎಂದರೆ ರಾಜ್ಯಗಳ ಒಕ್ಕೂಟವೇ ಹೊರತು ಒಂದು ಜಿಲ್ಲೆ, ಒಂದು ರಾಜ್ಯ ಅಲ್ಲ. 13 ರಾಜ್ಯಗಳನ್ನು ಯಾತ್ರೆಯಲ್ಲಿ ಒಳಗೊಳುವ ಗುರಿಯನ್ನು ಅವರು ಹೊಂದಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸಂವಿಧಾನ ರದ್ದುಗೊಳಿಸಲು ಮತ್ತು ದೇಶವನ್ನು ಮಾರಲು ಪ್ರಯತ್ನ ನಡೆಸುತ್ತಿದೆ ಎಂದು ಹರಿಹಾಯ್ದ ಅವರು, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎಲ್ಲಾ 80 ಲೋಕಸಭಾ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯೋನ್ಮುಖವಾಗಿದೆ. ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿ ಮತ್ತು ರಾಹುಲ್ ಪ್ರತಿನಿಧಿಸುವ ಅಮೇಥಿಯಲ್ಲಿ ಬಿಜೆಪಿ ಠೇವಣಿ ಕಳೆದುಕೊಳ್ಳುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.