ಕೋಳಿಕ್ಕೋಡ್, ಅ 09 (DaijiworldNews/DB): ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ದೇವಸ್ಥಾನವೊಂದರ ಅರ್ಚಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಕೇರಳದ ಕೊಯಿಲಾಂಡಿನಲ್ಲಿ ನಡೆದಿದೆ.
ಜಿಷ್ಣು ನಂಬೂದಿರಿ (28) ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅರ್ಚಕ. ಈತ ಮೆಪ್ಪಾಯುರ್ ಸಮೀಪದ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಗಮನಿಸಿದ ರಿಕ್ಷಾ ಚಾಲಕರು ಮತ್ತು ಸ್ಥಳೀಯರು ಅಕ್ಟೋಬರ್ 7ರಂದು ಆತನನ್ನು ಕೊಯಿಲಾಂಡಿ ಜಂಕ್ಷನ್ನಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ವಿಚಾರಣೆ ವೇಳೆ ತನಗೆ ಚಿಕನ್ ಪಾಕ್ಸ್ ಇದ್ದ ಕಾರಣ ಬುರ್ಖಾ ಧರಿಸಿದ್ದಾಗಿ ಹೇಳಿದ್ದಾನೆ. ಆದರೆ ಈ ಕಾಯಿಲೆ ಸಂಬಂಧ ಯಾವುದೇ ಕುರುಹು ಆತನ ಮೈಮೇಲೆ ಇರಲಿಲ್ಲ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಆದರೆ ಆತ ಯಾವುದೇ ಅಪರಾಧ ಎಸಗಿರುವ ಬಗ್ಗೆ ದೂರುಗಳು ದಾಖಲಾಗಿಲ್ಲದ ಕಾರಣ ಹೆಸರು, ವಿಳಾಸ, ಮತ್ತಿತರ ಅವಶ್ಯ ಮಾಹಿತಿಯನ್ನು ದಾಖಲಿಸಿಕೊಂಡು ಸಂಬಂಧಿಕರನ್ನು ಠಾಣೆಗೆ ಕರೆಸಿ ಅವರೊಂದಿಗೆ ಕಳುಹಿಸಿಕೊಡಲಾಯಿತು ಎಂದು ತಿಳಿದು ಬಂದಿದೆ.