ದಾವಣಗೆರೆ, ಅ 09 (DaijiworldNews/HR): ಬಿಜೆಪಿಯವರು ಈಸ್ಟ್ ಇಂಡಿಯಾ ಕಂಪನಿ ಮಾದರಿಯಲ್ಲೇ ಭಾರತವನ್ನು ಕೋಮುವಾದದ ಮೂಲಕ ವಿಭಜಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷ, ಮುಖಂಡರಾಗಲಿ 3,750 ಕಿಲೋಮೀಟರ್ ನಷ್ಟು ಪಾದಯಾತ್ರೆ ನಡೆಸಿದ ಉದಾಹರಣೆ ಇಲ್ಲ. ರಾಹುಲ್ ಗಾಂಧಿಯವರು ಆ ಕೆಲಸ ಮಾಡುತ್ತಿದ್ದಾರೆ ಎಂದರು.
ಇನ್ನು ಪಾದಯಾತ್ರೆ ಮೂಲಕ ಜನಸಾಮಾನ್ಯರ, ರೈತರ, ವಿದ್ಯಾವಂತರ, ನಿರುದ್ಯೋಗಿಗಳು, ಮಹಿಳೆಯರ ಸಮಸ್ಯೆ ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರ, ಕೋಮುವಾದ ಮತ್ತು ನಿರುದ್ಯೋಗ ಸಮಸ್ಯೆ ವಿರುದ್ದ ಮತ್ತು ಭಾರತವನ್ನು ಪುನರ್ ಜೋಡಿಸುವ, ಒಗ್ಗೂಡಿಸುವ ಮಹತ್ತರ ಉದ್ದೇಶದಿಂದ ಭಾರತ್ ಜೋಡೋ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.