ಮೆಹಬೂಬನಗರ, ಅ 09 (DaijiworldNews/DB): ಮೂರು ಕುಟುಂಬಗಳಿಗೆ ಸೇರಿದ 335ಕ್ಕೂ ಹೆಚ್ಚು ಕುರಿಗಳು ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ತೆಲಂಗಾಣದ ಮೆಹಬೂಬನಗರ ಜಿಲ್ಲೆಯ ಕೌಕುಂಟ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಕುರಿಗಳು 30 ಲಕ್ಷ ರೂ.ಗಳಿಗೂ ಹೆಚ್ಚು ಬೆಲೆಯದ್ದಾಗಿದ್ದು, ಕುರಿಗಳನ್ನೇ ಜೀವನಾಧಾರವಾಗಿಟ್ಟುಕೊಂಡ ಕುಟುಂಬಗಳು ಇದೀಗ ಕಂಗಾಲಾಗಿವೆ. ರಾಜೋಲಿ ರೈಲ್ವೇ ಕೆಳಸೇತುವೆ ಕೆಳಗೆ ಕುರಿಹಿಂಡುಗಳು ಮೇವು ತಿನ್ನುತ್ತಿದ್ದ ವೇಳೆ ಬೀದಿನಾಯಿಗಳ ಗುಂಪು ಅಟ್ಟಿಸಿಕೊಂಡು ಬಂದಿದ್ದು, ಇದರಿಂದ ದಿಕ್ಕಾಪಾಲಾಗಿ ಓಡಿದ ಕುರಿಗಳು ರೈಲು ಹಳಿ ಮೇಲೆ ಓಡುತ್ತಿದ್ದಾಗ ಘಟನೆ ಸಂಭವಿಸಿದೆ.
ಕುರಿಗಳನ್ನು ಕಳೆದುಕೊಂಡು ನಮ್ಮ ಜೀವನಾಧಾರವನ್ನೇ ಕಳೆದುಕೊಂಡಂತಾಗಿದೆ. ಸರ್ಕಾರ ನಮಗೆ ಪರಿಹಾರ ನೀಡಬೇಕು ಎಂದು ಕುರಿಗಳ ಮಾಲಕರಾದ ಮಾಸಣ್ಣ, ದೂಲಣ್ಣ ಮತ್ತು ತಿರುಪತಯ್ಯ ಮನವಿ ಮಾಡಿದ್ದಾರೆ.
ಕುರಿ, ಇತರ ಪ್ರಾಣಿಗಳು ರೈಲು ಹಳಿಗೆ ಪ್ರವೇಶಿಸಿ ರೈಲು ಗುದ್ದಿ ಸಾವನ್ನಪ್ಪಿದ್ದರೆ ರೈಲ್ವೇ ಇಲಾಖೆ ಪರಿಹಾರ ನೀಡುವುದಿಲ್ಲ. ಕುರಿ ವಿತರಣಾ ಯೋಜನೆಯಡಿ ಅವುಗಳನ್ನು ನೀಡಲಾಗಿದ್ದರೂ, ಅದರ ವಿಮಾ ಅವಧಿ ಒಂದು ವರ್ಷ ಮಾತ್ರ. ಸದ್ಯ ಆ ವಿಮೆಯೂ ಇಲ್ಲದ ಕಾರಣ ಪರಿಹಾರ ದೊರಕುವುದು ಕಷ್ಟ ಸಾಧ್ಯ ಎಂದು ಗೊರ್ರೆಲ ಮೇಕಲ ಪೆಂಪಕಂದಾರ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಉಡುತ ರವೀಂದರ್ ಹೇಳಿದ್ದಾರೆ.
2017ರ ಅಕ್ಟೋಬರ್ 24ರಂದು ತೆಲಂಗಾಣದಲ್ಲಿ ಸಿಕಂದರಾಬಾದ್ನಿಂದ ಕೊಲ್ಕತಾ ಹೋಗುತ್ತಿದ್ದ ಫಲಕ್ನುಮಾ ಎಕ್ಸ್ಪ್ರೆಸ್ ರೈಲಿನಡಿ ಸಿಲುಕಿ 400 ಕುರಿಗಳು ಮೃತಪಟ್ಟಿದ್ದವು. ಈ ಘಟನೆ ಯಾದಾದ್ರಿ ಭುವನಗಿರಿ ಜಿಲ್ಲೆಯ ರಾಮಣ್ಣಪೇಟೆ ಗ್ರಾಮದಲ್ಲಿ ನಡೆದಿತ್ತು.