ತಿರುವನಂತಪುರ, ಅ 09 (DaijiworldNews/HR): ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬರ ಹೊಟ್ಟೆಯಲ್ಲೇ ವೈದ್ಯರು ಚಿಮುಟ ಬಿಟ್ಟು ಹೊಲಿಗೆ ಹಾಕಿದ ಪ್ರಕರಣ ಐದು ವರ್ಷಗಳ ಬಳಿಕ ಕೋಝಿಕ್ಕೋಡ್ನಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಹರ್ಷಿನಾ ಎಂಬ ಮಹಿಳೆ ಈ ಬಗ್ಗೆ ದೂರು ದಾಖಲಿಸಿದ್ದು, ಈ ಬಗ್ಗೆ ತಕ್ಷಣ ವರದಿ ನೀಡುವಂತೆ ಆರೋಗ್ಯ ಕಾರ್ಯದರ್ಶಿಯವರಿಗೂ ಸಚಿವೆ ವೀಣಾ ಜಾರ್ಜ್ ಅವರು ಸೂಚನೆ ನೀಡಿದ್ದಾರೆ.
ಇನ್ನು ಹರ್ಷಿನಾ ಅವರು 2017ರ ನವೆಂಬರ್ ನಲ್ಲಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಮೂರನೇ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮೊದಲ ಎರಡು ಶಸ್ತ್ರಚಿಕಿತ್ಸೆಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ನೆರವೇರಿಸಲಾಗಿತ್ತು. ಮೂರನೇ ಶಸ್ತ್ರಚಿಕಿತ್ಸೆ ಬಳಿಕ ತೀವ್ರ ನೋವು ಕಾಣಿಸಿಕೊಂಡಿದ್ದು, ಕಿಡ್ನಿ ಕಲ್ಲಿನ ಸಮಸ್ಯೆ ಅಥವಾ ಕ್ಯಾನ್ಸರ್ ಗಡ್ಡೆಯಿಂದ ಹೀಗಾಗಿರಬೇಕು ಎಂದು ಭಾವಿಸಿದ್ದೆ. ಆದರೆ ಕಳೆದ ಅರು ತಿಂಗಳಿನಿಂದ ಮೂತ್ರನಾಳದ ಸೋಂಕು ಆರಂಭವಾಗಿ ಖಾಸಗಿ ಆಸ್ಪತ್ರೆಯಲ್ಲಿ ಸಿ.ಟಿ.ಸ್ಕ್ಯಾನ್ ಮಾಡಿಸಿದಾಗ ಹೊಟ್ಟೆಯಲ್ಲಿ ಲೋಹದ ವಸ್ತು ಇರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.