ಗುಜರಾತ್, ಅ 08 (DaijiworldNews/DB): ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ ಆರಂಭಿಸಿ ಕೆಲವೇ ದಿನಗಳಲ್ಲಿ ಮೂರು ಬಾರಿ ಸಮಸ್ಯೆಗೆ ಒಳಗಾಗಿದೆ. ವಾರಣಾಸಿಗೆ ತೆರಳುತ್ತಿದ್ದ ರೈಲಿನ ಒಂದು ರೇಕ್ನಲ್ಲಿ ಚಕ್ರ ಜಾಮ್ ಆಗಿದ್ದ ಕಾರಣ ಶನಿವಾರ ಸಂಚಾರ ಸ್ಥಗಿತಗೊಳಿಸಲಾಯಿತು.
ದಂಕೌರ್ ಮತ್ತು ವೈರ್ ನಿಲ್ದಾಣಗಳ ನಡುವೆ ಸಿ8 ಕೋಚ್ನ ಟ್ರಾಕ್ಷನ್ ಮೋಟಾರ್ನಲ್ಲಿ ಬೇರಿಂಗ್ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ವಾರಣಾಸಿಗೆ ಹೋಗಲಿದ್ದ ರೈಲಿನಲ್ಲಿ ದೋಷ ಇರುವುದನ್ನು ಪತ್ತೆ ಹಚ್ಚಿದ ಸಿಬಂದಿ ಕಾರ್ಯಾಚರಣೆ ನಿಲ್ಲಿಸಲು ಸೂಚಿಸಿದ ಮೇರೆಗೆ ಪ್ರಯಾಣ ಮೊಟಕುಗೊಳಿಸಲಾಯಿತು.
ಬಳಿಕ ತಾಂತ್ರಿಕ ಸಿಬಂದಿ ರೈಲು ತಪಾಸಣೆ ನಡೆಸಿದರು. ಬಳಿಕ ರೈಲನ್ನು 20 ಕಿಮೀ ಮುಂದೆ ಖುರ್ಜಾ ರೈಲು ನಿಲ್ದಾಣಕ್ಕೆ ಕಡಿಮೆ ವೇಗದಲ್ಲಿ ಕೊಂಡೊಯ್ದು ಪ್ರಯಾಣಿಕರನ್ನು ನಿಲ್ದಾಣದಲ್ಲಿ ಶತಾಬ್ದಿ ಎಕ್ಸ್ಪ್ರೆಸ್ಗೆ ಸ್ಥಳಾಂತರಿಸಲಾಯಿತು.
ಗಾಂಧೀನಗರ- ಮುಂಬಯಿ ನಡುವೆ ಸಂಚರಿಸುವ ರೈಲು ಗುಜರಾತ್ನ ಆನಂದ್ ನಿಲ್ದಾಣದ ಬಳಿ ಶುಕ್ರವಾರ ಹಸುವೊಂದಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಢಿಕ್ಕಿಯಾಗಿ ರೈಲಿನ ಮುಂದಿನ ಬಂಪರ್ಗೆ ಸಣ್ಣ ಹಾನಿಯಾಗಿತ್ತು. ಅಹಮದಾಬಾದ್ ಬಳಿ ಇದೇ ರೈಲು ಗುರುವಾರ ಎಮ್ಮೆಗಳಿಗೆ ಢಿಕ್ಕಿಯಾಗಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿದ್ದವು. ಘಟನೆಯಲ್ಲಿ ರೈಲಿನ ಮುಂಭಾಗದ ಒಂದು ಬದಿ ತುಂಡಾಗಿತ್ತು. ಇದೀಗ ಶನಿವಾರ ಚಕ್ರ ಜಾಮ್ ಆಗಿದ್ದು ಮೂರನೇ ಬಾರಿಗೆ ದೋಷ ಕಂಡು ಬಂದಿದೆ.