ಬೆಂಗಳೂರು, ಅ 08 (DaijiworldNews/DB): ಮೋದಿ ಸರ್ಕಾರವನ್ನು ಅದಾನಿ-ಅಂಬಾನಿ ಸರ್ಕಾರ ಎನ್ನುವ ರಾಹುಲ್ ಗಾಂಧಿ ಅವರೇ, ರಾಜಸ್ಥಾನದಲ್ಲಿರುವುದು ಅದಾನಿ ಸರ್ಕಾರವೋ, ಕಾಂಗ್ರೆಸ್ ಸರ್ಕಾರವೋ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಉದ್ಯಮಿ ಗೌತಮ್ ಅದಾನಿ ಅವರನ್ನು 'ಭಾಯ್' ಎಂದು ಸಂಬೋಧಿಸಿರುವ ವಿಚಾರವಾಗಿ ಗೆಹ್ಲೋಟ್ ಮತ್ತು ಗೌತಮ್ ಅದಾನಿಯವರು ಜೊತೆಗಿರುವ ಫೋಟೋದೊಂದಿಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ಈ ಪ್ರಶ್ನೆಯನ್ನು ಎಸೆದಿದೆ.
ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವತಿಯಿಂದ ನಡೆದ ರಾಜಸ್ಥಾನ ಹೂಡಿಕೆ ಸಮಾವೇಶದಲ್ಲಿ ಸಿಎಂ ಗೆಹ್ಲೋಟ್ ಪಕ್ಕದಲ್ಲಿ ಅದಾನಿ ಗ್ರೂಪ್ನ ಮುಖ್ಯಸ್ಥ ಗೌತಮ್ ಅದಾನಿ ಆಸೀನರಾಗಿದ್ದರು. ಈ ಫೋಟೋಕ್ಕೆ ಬಿಜೆಪಿ ತೀವ್ರ ಟೀಕೆ ವ್ಯಕ್ತಪಡಿಸಿತ್ತು. ಅದಾನಿ ಹೆಸರು ಹೇಳಿಕೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿರುವ ಕಾಂಗ್ರೆಸ್ ಈಗ ಏನು ಉತ್ತರ ನೀಡುತ್ತಿದೆ ಎಂದೂ ಪ್ರಶ್ನಿಸಿತ್ತು.
ಬಿಜೆಪಿಯಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಗೆಹ್ಲೋಟ್, ಕಾಂಗ್ರೆಸ್ ಕೈಗಾರಿಕೆ ವಿರೋಧಿಯಲ್ಲ. ಹೂಡಿಕೆಯನ್ನು ನಮ್ಮ ಪಕ್ಷ ಯಾವಾಗಲೂ ಸ್ವಾಗತಿಸುತ್ತದೆ ಎಂದಿದ್ದಾರೆ.
ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಣ, 10,000 ಎಂಡಬ್ಲ್ಯು ಸೌರ ವಿದ್ಯುತ್ ಸೌಲಭ್ಯ, ಸಿಮೆಂಟ್ ಘಟಕದ ವಿಸ್ತರಣೆ ಸೇರಿದಂತೆ ವಿವಿಧ ಕೈಗಾರಿಕೆಗಳ ಸ್ಥಾಪನೆಗಾಗಿ ರಾಜಸ್ಥಾನದಲ್ಲಿ ಮುಂದಿನ ಐದರಿಂದ ಏಳು ವರ್ಷಗಳಲ್ಲಿ 65 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ಕಾರ್ಯಕ್ರಮದಲ್ಲಿ ಅದಾನಿ ಘೋಷಿಸಿದ್ದರು.