ವಿಜಯಪುರ, ಅ 08 (DaijiworldNews/HR): ಭಾರತ್ ಜೋಡೋ ಯಾತ್ರೆ ವೇಳೆ ಭಾಷಣದಲ್ಲಿ ಪೊಲೀಸರ ವಿರುದ್ಧ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಫೇಸ್ಬುಕ್ನಲ್ಲಿ ಕಮೆಂಟ್ ಮಾಡಿದ್ದ ವಿಜಯಪುರದ ಪೊಲೀಸ್ ಪೇದೆಯೊಬ್ಬರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಭಾರತ್ ಜೋಡೋ ಯಾತ್ರೆದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇನ್ನು ಆರು ತಿಂಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಕೆಲವು ಪೊಲೀಸರಿಗೆ ಹೇಳಲು ಬಯಸುತ್ತೇನೆ, ನೀವು ಬಿಜೆಪಿ ಜತೆ ಶಾಮೀಲಾದರೆ ನಿಮಗೆ ತಕ್ಕ ಪಾಠ ಕಲಿಸುವ ಕಾಲ ಬರಲಿದೆ ಎಂದು ಎಚ್ಚರಿಕೆ ನೀಡಿದ್ದರು.
ಇನ್ನು ಸಿದ್ದರಾಮಯ್ಯ ಪೊಲೀಸರ ವಿರುದ್ಧ ಮಾತನಾಡಿದ ವಿಡಿಯೋ ಇದ್ದ ಪೋಸ್ಟ್ವೊಂದಕ್ಕೆ ಕಮೆಂಟ್ ಮಾಡಿದ್ದ ವಿಜಯಪುರ ಗ್ರಾಮೀಣ ಠಾಣೆಯ ಕಾನ್ಸ್ಟೇಬಲ್ ರಾಜಶೇಖರ್ ಖಾನಾಪುರ, ಪೊಲೀಸರಿಗೆ ಬೈಯ್ಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೆ ಮನೆಗೆ ಹೋಗು ಎಂದು ಸವಾಲು ಹಾಕಿದ್ದರು.
ಸಿದ್ದರಾಮಯ್ಯ ಅಭಿಮಾನಿಗಳು ಸರಕಾರಿ ಹುದ್ದೆಯಲ್ಲಿದ್ದು ಸಾಮಾಜಿಕ ಜಾಲಾತಾಣಗಳಲ್ಲಿ ಬಿಜೆಪಿ ಪರ ಹೇಳಿಕೆ ನೀಡಿರುವ ಪೇದೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದು, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿ. ಸುಬ್ರಹ್ಮಣ್ಯ ಪೇದೆ ವಿರುದ್ಧ ದೂರು ದಾಖಲಿಸಿದ ಬೆನ್ನಲ್ಲೇ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಕಾನ್ಸ್ಟೇಬಲ್ ರಾಜಶೇಖರ್ ಖಾನಾಪುರರನ್ನು ಅಮಾನತು ಮಾಡಿದ್ದಾರೆ.