ನವದೆಹಲಿ, ಅ 08 (DaijiworldNews/DB): ಚುನಾವಣೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಸ್ಪರ್ಧೆಯಲ್ಲಿ ನಾನು ಉಳಿಯಲಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಕಾಂಗ್ರೆಸ್ನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಸಂಸದ ಶಶಿ ತರೂರ್ ಅವರು ಚುನಾವಣೆಯಿಂದ ಹಿಂದೆ ಸರಿಯಲಿದ್ದಾರೆ ಎಂಬ ಊಹಾಪೋಹಗಳನ್ನು ತಳ್ಳಿ ಹಾಕಿರುವ ಅವರು ಈ ಸಂಬಂಧ ಟ್ವಿಟರ್ನಲ್ಲಿ ವೀಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ಇದೊಂದು ಸವಾಲು. ಈ ಸವಾಲಿನಿಂದ ಹಿಂದೆ ಸರಿಯುವುದಿಲ್ಲ. ಪಕ್ಷದೊಳಗೆ ಸ್ನೇಹಪರ ಸ್ಪರ್ಧೆ ಇದಾಗಿರುವುದರಿಂದ ಸೋಲು, ಗೆಲುವಿನ ಲೆಕ್ಕಾಚಾರ ಬದಿಗೊತ್ತಿ ಸ್ಪರ್ಧೆಗಿಳಿಯಲಿದ್ದೇನೆ ಎಂದಿದ್ದಾರೆ.
ನಾನು ಚುನಾವಣೆಯಿಂದ ಹಿಂದೆ ಸರಿಯುತ್ತೇನೆಂಬ ವದಂತಿಗಳು ಕೇವಲ ವದಂತಿಗಳಷ್ಟೇ. ಹೋರಾಟದಿಂದ ನಿರ್ಗಮಿಸಿದ ಸಂದರ್ಭ ನನ್ನ ಜೀವನದಲ್ಲೇ ಇಲ್ಲ. ಪಕ್ಷದೊಳಗಿನ ಸೌಹಾರ್ದ ಸ್ಪರ್ಧೆಗೆ ಸ್ಪರ್ಧಿಸುವುದು ಉತ್ತಮ ಬೆಳವಣಿಗೆ. ಹಾಗೆಯೇ ಇದು ಅಂತಿಮ ಹೋರಾಟ. ನನಗೆ ಚುನಾವಣೆಯಲ್ಲಿ ಮತ ನೀಡಿ, ನಾಳೆಗಳ ಬಗ್ಗೆ ಯೋಚಿಸಿ, ತರೂರ್ ಬಗ್ಗೆ ಯೋಚಿಸಿ ಎಂದು ಹೇಳಿಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯ ನಾಮಪತ್ರ ಹಿಂಪಡೆಯಲು ಇಂದು (ಅಕ್ಟೋಬರ್ 8) ಕೊನೆಯ ದಿನವಾಗಿದ್ದು, ಇಂದೇ ತರೂರ್ ಅವರು ವೀಡಿಯೋ ಮೂಲಕ ತಮ್ಮ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, 19ರಂದು ಫಲಿತಾಂಶ ಹೊರಬೀಳಲಿದೆ.