ನವದೆಹಲಿ, ಅ 08 (DaijiworldNews/DB): ಕೇವಲ ಭಾಷಣಗಳು ಮತ್ತು ಜಾಹೀರಾತುಗಳ ಆಧಾರದಲ್ಲಿ ಕೇಜ್ರಿವಾಲ್ ಸರ್ಕಾರದ ನಡೆಯುತ್ತಿದೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ವಿ.ಕೆ.ಸಕ್ಸೇನಾ ವ್ಯಂಗ್ಯವಾಡಿದ್ದಾರೆ.
ಎಎಪಿ ಸರ್ಕಾರದ ಆಡಳಿತದಲ್ಲಿ ಎಲ್ಜಿ ಸಕ್ಸೇನಾ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ನಾನು ಪತ್ರ ಬರೆಯುವುದು ಸರ್ಕಾರ ತಪ್ಪು ಎಸಗದಂತೆ ತಿಳಿಹೇಳಲು. ಆದರೆ ಇದನ್ನೇ ಅವರು ನನ್ನ ವಿರುದ್ದ ವೈಯಕ್ತಿಕ ದಾಳಿಗೆ ಬಳಸಿಕೊಳ್ಳುತ್ತಿದ್ದಾರೆ. ಅವರ ಸರ್ಕಾರ ನಡೆಯುತ್ತಿರುವುದು ಭಾಷಣ ಹಾಗೂ ಜಾಹೀರಾತುಗಳ ಆಧಾರದಲ್ಲಿ. ಸಿಎಂ ಅರವಿಂದ ಕೇಜ್ರೀವಾಲ್ ಹಾಗೂ ಅವರ ಸಂಪುಟದ ಸಚಿವರು ಸಾಂವಿಧಾನಿಕ ಕರ್ತವ್ಯ ಮತ್ತು ಆಡಳಿತಾತ್ಮಕವಾದ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ದೆಹಲಿ ಸರ್ಕಾರ ಹಿಂಪಡೆದಿರುವ ಅಬಕಾರಿ ನೀತಿ, ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಗೈರು ಹಾಜರಾದ ಸಿಎಂ ಮತ್ತು ಸಚಿವರ ನಡೆ ಬಗ್ಗೆ ಪ್ರಶ್ನಿಸಿದ್ದೇನೆ. ವಿದ್ಯುತ್ ಸಬ್ಸಿಡಿ, ಶಿಕ್ಷಕರ ನೇಮಕಾತಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ತನಿಖೆ ನಡೆಸಲು ಆದೇಶ ಮಾಡಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಆರೋಪ ಮಾಡುವ ಮೂಲಕ ಕೇಜ್ರೀವಾಲ್ ಮತ್ತವರ ಸಹದ್ಯೋಗಿಗಳು ನಷ್ಟ ಉಂಟು ಮಾಡುತ್ತಿದ್ದಾರೆ. ಈ ಹಿಂದೆಯೂ ನನ್ನನ್ನೂ ಸೇರಿದಂತೆ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಂಜಾಬ್ ಮಾಜಿ ಸಚಿವ ವಿಕ್ರಮ್ಜೀತ್ ಸಿಂಗ್ ಮಜೀತಿಯಾ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಬಳಿಕ ಕ್ಷಮೆ ಕೇಳಿದ್ದರು ಎಂದು ಸಕ್ಸೇನಾ ತಿಳಿಸಿದರು.