ತುಮಕೂರು, ಅ 08 (DaijiworldNews/DB): ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರಲ್ಲಿ ಯಾರೇ ಗೆದ್ದರೂ ಪಕ್ಷದಲ್ಲಿ ಅವರು ಸ್ವತಂತ್ರವಾಗಿರುತ್ತಾರೆಯೇ ಹೊರತು ರಿಮೋಟ್ ಕಂಟ್ರೋಲರ್ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ ಜೋಡೋ ಯಾತ್ರೆ ತುಮಕೂರು ತಲುಪಿದ್ದು, ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಮೋಟ್ ಕಂಟ್ರೋಲರ್ ವ್ಯವಸ್ಥೆ ಕಾಂಗ್ರೆಸ್ನಲ್ಲಿ ಇಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಇಬ್ಬರೂ ಪಕ್ಷ ನಿಷ್ಠೆ ಹೊಂದಿದವರು. ಇಬ್ಬರಲ್ಲಿಯೂ ದೂರದೃಷ್ಟಿ, ಪಕ್ಷ ಸಂಘಟನೆಯಲ್ಲಿ ಉತ್ತಮ ಕಾರ್ಯವೈಖರಿ ನಿರೂಪಿಸುವ ಸಾಮರ್ಥ್ಯವಿದೆ. ಇಬ್ಬರಲ್ಲಿ ಯಾರೇ ಆಯ್ಕೆಯಾದರೂ ಅವರು ರಿಮೋಟ್ ಕಂಟ್ರೋಲರ್ ಆಗುವುದಿಲ್ಲ ಎಂದವರು ತಿಳಿಸಿದರು.
ಖರ್ಗೆ ಎಐಸಿಸಿ ಅಧ್ಯಕ್ಷರಾದರೆ ಅವರು ಸೋನಿಯಾ ಗಾಂಧಿಯವರ ರಿಮೋಟ್ ಕಂಟ್ರೋಲರ್ ಆಗಲಿದ್ದಾರೆ ಎಂಬ ಬಿಜೆಪಿಯ ಟೀಕೆ ಬೆನ್ನಲ್ಲೇ ರಾಹುಲ್ ಗಾಂಧಿ ಈ ಮಾತನ್ನು ಹೇಳಿದ್ದಾರೆ.