ಅಸ್ಸಾಂ, ಅ 08 (DaijiworldNews/DB): ಕಾಂಗ್ರೆಸ್ ಪಕ್ಷವು ಈಶಾನ್ಯ ರಾಜ್ಯವನ್ನು ಹಿಂಸಾಚಾರ ಮತ್ತು ಅರಾಜಕತೆಗೆ ದೂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಅಸ್ಸಾಂ ಪ್ರವಾಸದಲ್ಲಿರುವ ಅವರು ಮಾತನಾಡಿ, 70 ವರ್ಷಗಳ ಇತಿಹಾಸವಿರುವ ಆ ಪಕ್ಷ ಹಿಂಸಾಚಾರ ಮತ್ತು ಅರಾಜಕತೆಗೆ ಈಶಾನ್ಯ ರಾಜ್ಯಗಳನ್ನು ದೂಡಿದೆ. ಆದರೆ ಬಿಜೆಪಿಯ ಎಂಟು ವರ್ಷಗಳ ಆಡಳಿತದಲ್ಲಿ ಇಲ್ಲಿ ಶಾಂತಿ ನೆಲೆಸಿದ್ದು, 9 ಸಾವಿರ ಮಂದಿ ಶಸ್ತ್ರಾಸ್ತ್ರ ತ್ಯಜಿಸುವಂತೆ ಮಾಡಿದೆ. ಅಭಿವೃದ್ದಿ ಪಥದಲ್ಲಿ ಈ ರಾಜ್ಯಗಳು ದಾಪುಗಾಲಿಡುತ್ತಿವೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಎಫ್ಎಸ್ಪಿಎಯನ್ನು ಈಶಾನ್ಯದಿಂದ ತೆಗೆದು ಹಾಕುವುದಾಗಿ ರಾಹುಲ್ ಗಾಂಧಿ ಸಮಾಧಾನಕ್ಕಾಗಿ ಹೇಳಿಕೆ ನೀಡಿದ್ದರು. ಆದರೆ ನಾವು ಅದನ್ನು ನಿರ್ಮೂಲನೆ ಮಾಡುವುದರೊಂದಿಗೆ ಶಾಂತಿ ಸ್ಥಾಪನೆ ಮಾಡುತ್ತೇವೆಂದು ಹೇಳಿದ್ದೆವು. ಕೊಟ್ಟ ಭರವಸೆಯನ್ನು ಈಡೇರಿಸಿದ ತೃಪ್ತಿ ನಮ್ಮದು ಎಂದು ಶಾ ತಿಳಿಸಿದರು.
ಈಶಾನ್ಯ ರಾಜ್ಯಗಳಲ್ಲಿ ಉಂಟಾಗುವ ಪ್ರವಾಹದಿಂದಾಗಿ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಹೀಗಾಗಿ ಪ್ರವಾಹದಿಂದ ಈ ರಾಜ್ಯವನ್ನು ರಕ್ಷಿಸಲು ದೀರ್ಘಾವಧಿ ಯೋಜನೆ ರೂಪಿಸುವಂತೆ ಅಸ್ಸಾಂ ಸರ್ಕಾರಕ್ಕೆ ಹೇಳಲಾಗಿದೆ. ಮುಂದೆ ಇನ್ನಷ್ಟು ಅಭಿವೃದ್ದಿ ಕಾರ್ಯಗಳು ಇಲ್ಲಿ ನಡೆಯಲಿದೆ ಎಂದು ಅಮಿತ್ ಶಾ ವಿವರಿಸಿದರು.