ಬಾಗಲಕೋಟೆ, ಅ 07 (DaijiworldNews/DB): ಮದ್ಯದ ನಶೆ ಹತ್ತಿದರೆ ಜನರ ಎಡವಟ್ಟು ಜಾಸ್ತಿ ಇರುತ್ತದೆ. ಇಲ್ಲೊಬ್ಬ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಮೊಸಳೆ ಹಿಡಿಯುವುದಾಗಿ ಹೇಳಿ ಕೆರೆಗೆ ಧುಮುಕಿ ಈಜು ಬಾರದೆ ಚಡಪಡಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಮೌಲಾಸಾಬ್ ವಾಲೀಕಾರ ಎಂಬಾತನೇ ಮೊಸಳೆ ಹಿಡಿಯುವ ದುಸ್ಸಾಹಸ ಮಾಡಿ ಕೆರೆಗೆ ಧುಮುಕಿದಾತ. ಬಾಗಲಕೋಟೆ ತಾಲೂಕಿನ ಮುರನಾಳ ಪುನರ್ ವಸತಿ ಕೇಂದ್ರದ ಕೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಮೊಸಳೆ ಕಂಡು ಬಂದಿತ್ತು. ಮೊಸಳೆ ನೋಡಲು ಕೆರೆ ಬಳಿ ಸಾಕಷ್ಟು ಜನ ಬರುತ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದಿದ್ದ ಮದ್ಯದ ಅಮಲಿನಲ್ಲಿದ್ದ ಮೌಲಾಸಾಬ್, ತಾನು ಮೊಸಳೆ ಹಿಡಿಯುವುದಾಗಿ ಕೆರೆಗೆ ಹಾರಿದ್ದಾನೆ. ಆದರೆ ಕೆರೆಯ ಮಧ್ಯಕ್ಕೆ ಹೋದ ಮೌಲಾಸಾಬ್ಗೆ ಈಜಲು ಸಾಧ್ಯವಾಗದೆ ನೀರಲ್ಲಿ ಮುಳುಗಲಾರಂಭಿಸಿದ್ದಾನೆ. ಈ ವೇಳೆ ಆತನನ್ನು ಗಮನಿಸಿದ ನೆರೆದಿದ್ದ ಜನ ಆತನನ್ನು ರಕ್ಷಿಸಲು ನಾನಾ ಪ್ರಯತ್ನಗಳನ್ನು ಮಾಡಿ ಕೊನೆಗೂ ಸುರಕ್ಷಿತವಾಗಿ ದಡ ಸೇರಿಸಿದ್ದಾರೆ.
ಮದ್ಯದ ನಶೆಯಲ್ಲಿ ತಾನು ಮಾಡಿರುವ ಎಡವಟ್ಟಿನಿಂದ ಜನರೆದುರು ಮುಖಭಂಗಕ್ಕೊಳಗಾದ ಮೌಲಾಸಾಬ್ ಬಳಿಕ ಸ್ಥಳದಿಂದ ಸೀದಾ ತೆರಳಿದ್ದಾನೆ.