ಬೆಂಗಳೂರು, ಅ 07 (DaijiworldNews/DB): ರಾಷ್ಟ್ರಕವಿ ಕುವೆಂಪು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದರು. ಕರ್ನಾಟಕ ಶಾಂತಿಯ ತೋಟ ಆಗಿತ್ತು. ಆದರೆ ಬಿಜೆಪಿ ಆಡಳಿತದಲ್ಲಿ ಉಡುವ ಬಟ್ಟೆಯಿಂದ ಹಿಡಿದು ತಿನ್ನುವ ಅನ್ನದವರೆಗೆ ದ್ವೇಷ ಬಿತ್ತಲಾಗುತ್ತಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಕರ್ನಾಟಕದಲ್ಲಿ, ದೇಶದಲ್ಲಿ ಮತ್ತೆ ಶಾಂತಿಯ ತೋಟ ನಿರ್ಮಿಸುವ ಉದ್ದೇಶದಿಂದಲೇ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದಾಗಿ ಹೇಳಿದೆ.
ಕಾಫಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ವಾರ್ಷಿಕ 10 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿತ್ತು ಬಿಜೆಪಿ. ಆದರೆ ಈಗ 10 ರೂಪಾಯಿಯನ್ನೂ ನೀಡಲಿಲ್ಲ! ಬಿಜೆಪಿ ತನ್ನ ಪ್ರಣಾಳಿಕೆ ಒಮ್ಮೆ ತೆಗೆದು ನೋಡಲಿ, ಪ್ರಣಾಳಿಕೆಯ ಭರವಸೆಗಳು ಎಷ್ಟು ಈಡೇರಿಸಲಾಗಿದೆ ಎಂದು ಪತ್ರಿಕಾಗೋಷ್ಠಿ ಮಾಡಿ ಹೇಳಲಿ. ಸಾಧ್ಯವೇ ಬಿಜೆಪಿ ? ಎಂದು ಪ್ರಶ್ನಿಸಿದೆ.
ನಿರುದ್ಯೋಗ ಐತಿಹಾಸಿಕ ಮಟ್ಟದಲ್ಲಿದೆ. ರೂಪಾಯಿ ಮೌಲ್ಯ ಐತಿಹಾಸಿಕ ಮಟ್ಟದಲ್ಲಿ ಕುಸಿದಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತ ಐತಿಹಾಸಿಕ ಕುಸಿತ ಕಂಡಿದೆ. ಬೆಲೆ ಏರಿಕೆ ದಾಖಲೆ ಸೃಷ್ಟಿಸುತ್ತಿದೆ. ಕೋವಿಡ್, ಪ್ರವಾಹದಿಂದ ರೈತರು ಕಂಗೆಟ್ಟಿದ್ದಾರೆ. ಈ ಎಲ್ಲದಕ್ಕೆ ಪರಿಹಾರ ಕಂಡುಕೊಳ್ಳಲು ಭಾರತ್ ಜೋಡೋ ಯಾತ್ರೆ ಎಂದು ತಿಳಿಸಿದೆ.