ಬೀದರ್, ಅ 07 (DaijiworldNews/HR): ಬೀದರ್ ನಗರದ ಐತಿಹಾಸಿಕ ಮಹಮ್ಮದ್ ಗವಾನ್ ಮದರಸಾದೊಳಗೆ ಹಿಂದೂ ಕಾರ್ಯಕರ್ತರು ನುಗ್ಗಿ ಪೂಜೆ ಸಲ್ಲಿಸಿದ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿದ್ದಾರೆ.
ಎಫ್ಐಆರ್ನಲ್ಲಿ ಹೆಸರಿಸಲಾದ ಒಂಬತ್ತು ಆರೋಪಿಗಳ ಪೈಕಿ ಮುನ್ನಾ, ನರೇಶ್, ಯಲ್ಲಾಲಿಂಗ ಮತ್ತು ಪ್ರಕಾಶ್ ಅವರನ್ನು ಬಂಧಿಸಲಾಗಿದ್ದು, ಬೀದರ್ ಜಿಲ್ಲೆಯಲ್ಲಿ ಕರ್ನಾಟಕ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಮಹಮ್ಮದ್ ಗವಾನ್ ಮದರಸಾ ಮತ್ತು ಮಸೀದಿ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇನ್ನು ಘಟನೆಯನ್ನು ಖಂಡಿಸಿ ಶುಕ್ರವಾರದ ಪ್ರಾರ್ಥನೆಯ ನಂತರ ಪ್ರತಿಭಟನೆಗೆ ಕರೆ ನೀಡಿದ್ದ ಮುಸ್ಲಿಂ ಸಂಘಟನೆಗಳು, ಬಂಧನದ ನಂತರ ಪ್ರತಿಭಟನೆಯನ್ನು ಹಿಂಪಡೆದಿವೆ.
ಪೊಲೀಸರ ಪ್ರಕಾರ, ಬೀದರ್ನಲ್ಲಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಿಂದೂ ಕಾರ್ಯಕರ್ತರ ಗುಂಪು ಬುಧವಾರ ರಾತ್ರಿ ಐತಿಹಾಸಿಕ ಮಹ್ಮದ್ ಗವಾನ್ ಮದರಸಾದ ಆವರಣದೊಳಗೆ ನುಗ್ಗಿದೆ.
ಪಾರಂಪರಿಕ ಕಟ್ಟಡವೆಂದು ಪರಿಗಣಿಸಲ್ಪಟ್ಟಿರುವ ಮದರಸಾವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಿರ್ವಹಿಸುತ್ತದೆ.
ಘಟನೆಯನ್ನು ಖಂಡಿಸಿರುವ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ, ಗೇಟ್ ಬೀಗ ಮುರಿದು ಐತಿಹಾಸಿಕ ಮಹಮ್ಮದ್ ಗವಾನ್ ಮಸೀದಿ ಮತ್ತು ಮಸೀದಿಯನ್ನು ಅಪವಿತ್ರಗೊಳಿಸಲು ಯತ್ನಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬೀದರ್ ಪೊಲೀಸರು ಇದಕ್ಕೆ ಹೇಗೆ ಅವಕಾಶ ಕೊಡುತ್ತೀರಿ? ಕೇವಲ ಮುಸ್ಲಿಮರನ್ನು ಕೀಳಾಗಿಸುವುದಕ್ಕಾಗಿ ಬಿಜೆಪಿ ಇಂತಹ ಚಟುವಟಿಕೆಯನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ್ದಾರೆ.