ಬೆಂಗಳೂರು, ಅ 07 (DaijiworldNews/DB): ಇಟಲಿಯ ಅಕ್ಕ ಭಾರತದಿಂದ ಓಡಲು ದಾರಿ ಹುಡುಕುತ್ತಿದ್ದಾರೆ. ಭಾರತ್ ಜೋಡೋ ಅಲ್ಲ, ಅದು ಯಶಸ್ವಿಯೂ ಆಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲು ಹೇಳಿದ್ದಾರೆ.
ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿ ಗೇಟ್ ನಂ.2ರಲ್ಲಿ ಇಂದು ಆರಂಭವಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ, ಭ್ರಷ್ಟಾಚಾರವೇ ದೇಶಕ್ಕೆ ಭಾರತದ ಕೊಡುಗೆ. ಆರು ದಶಕ ಆಡಳಿತ ಮಾಡಿದ ಆ ಪಕ್ಷ ಹಗರಣಗಳಲ್ಲೇ ಕಾಲ ಕಳೆದಿದೆ ಹೊರತು ಅಭಿವೃದ್ದಿ ದೃಷ್ಟಿಯಿಂದ ಯಾವುದೇ ಕಾರ್ಯಗಳಾಗಿಲ್ಲ. ಶಾಸ್ತ್ರೀಜಿ ಹೊರತುಪಡಿಸಿ ಕಾಂಗ್ರೆಸ್ನ ಎಲ್ಲಾ ಪ್ರಧಾನಿಗಳೂ ಭ್ರಷ್ಟರಾಗಿಯೇ ಆಡಳಿತ ನಡೆಸಿದ್ದರು ಎಂದು ಟೀಕಿಸಿದರು.
ಹಾಸ್ಟೆಲ್, ಹಾಸಿಗೆ, ಸೋಲಾರ್, ಮೊಟ್ಟೆ, ನೇಮಕಾತಿ ಸೇರಿದಂತೆ ಎಲ್ಲಾ ವಿಚಾರದಲ್ಲಿಯೂ ಹಗರಣಗಳನ್ನು ಮಾಡಿರುವುದೇ ಕಾಂಗ್ರೆಸ್ನ ದೊಡ್ಡ ಸಾಧನೆ. ಸಿದ್ದರಾಮಯ್ಯನವರು ಜಾತಿಗಳ ಮಧ್ಯೆ ಸಂಘರ್ಷ ತಂದಿಟ್ಟು ಖುಷಿ ಪಟ್ಟಿದ್ದಾರೆ. ಅರ್ಕಾವತಿ ರೀಡೂ ಹಗರಣದಲ್ಲಿ ಸಿದ್ದರಾಮಯ್ಯ ಅವರು ಎಲ್ಲಿರುತ್ತಾರೆಂಬುದನ್ನು ಎಲ್ಲರೂ ಕಾದು ನೋಡಿ ಎಂದರು.
ಬಿಜೆಪಿಯಿಂದ ನಡೆಯುತ್ತಿರುವ ಪ್ರವಾಸಕ್ಕೆ ಜನ ಹಾರೈಸಿದ್ದಾರೆ. ಚುನಾವಣೆಗಾಗಿ ಪೂರ್ವ ತಯಾರಿಗಳು ನಡೆಯುತ್ತಿದೆ. ಪಕ್ಷವನ್ನು ಇನ್ನೊಮ್ಮೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಂಘಟಿತರಾಗಿ ಶ್ರಮಿಸಬೇಕು ಎಂದವರು ಇದೇ ವೇಳೆ ತಿಳಿಸಿದರು.
ಪ್ರಕಾಶನ ಪ್ರಕೋಷ್ಠದ ವತಿಯಿಂದ ಹೊರತಂದ ಸಮಷ್ಟಿ, ಧ್ಯೇಯಪಥ ಪುಸ್ತಕಗಳನ್ನು ಈ ವೇಳೆ ಲೋಕಾರ್ಪಣೆಗೊಳಿಸಲಾಯಿತು.