ತಿರುವರೂರು, ಅ 07 (DaijiworldNews/DB): ಚಿಕನ್ ಬಿರಿಯಾನಿ ಸೇವಿಸಿ ವ್ಯಕ್ತಿಯೊಬ್ಬ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ತಮಿಳುನಾಡಿನ ತಿರುವರೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೆಲಂಗುಡಿಯ ಸೆಲ್ವಮುರುಗನ್ (24) ಮೃತಪಟ್ಟವರು. ತಿರುವಾರೂರು ಸಮೀಪದ ತಿರುವಾಸಲ್ ಪ್ರದೇಶದ ಚೆಲತುರೈ ಅವರ ಪುತ್ರ ವಿಘ್ನೇಶ್ ಅವರ ಪತ್ನಿ ಮರಿಯಮ್ಮಳ್ (26) ಅವರ ಸೀಮಂತ ಕಾರ್ಯಕ್ರಮ ಗುರುವಾರ ನಡೆದಿತ್ತು. ಕಾರ್ಯಕ್ರಮದಲ್ಲಿ ಐದು ಬಗೆಯ ಮಿಶ್ರ ಅನ್ನದೊಂದಿಗೆ ಬಿರಿಯಾನಿಯನ್ನೂ ಬಡಿಸಲಾಗಿತ್ತು. ಆದರೆ ಬಿರಿಯಾನಿ ಸೇವಿಸಿದ ತತ್ಕ್ಷಣ 20ಕ್ಕೂ ಅಧಿಕ ಮಂದಿ ವಾಂತಿ ಮಾಡಿಕೊಂಡಿದ್ದು, ಕೆಲವರು ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ತಿರುವರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಈ ಪೈಕಿ 12 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದರೆ, ಸೆಲ್ವ ಮುರುಗನ್ ಅವರು ಮೃತಪಟ್ಟರು. ಆರು ಮಂದಿ ಐಸಿಯುವಿನಲ್ಲಿದ್ದಾರೆ. ಗರ್ಭಿಣಿ ಮರಿಯಮ್ಮಳ್ ಸೇರಿದಂತೆ ಚಂಡೂರು(10) ಇಲಾರ (6) ಸೆಲ್ವಗಣಪತಿ(25) ಬಾಲಾಜಿ (22) ರಾಜಮಾಣಿಕ್ಕಂ (60) ಹಾಗೂ ನಾಲ್ಕು ವರ್ಷದ ಮಗು ಕೂಡಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದೆರಡು ದಿನಗಳ ಹಿಂದಷ್ಟೇ ತಿರುಪುರದ ಮಕ್ಕಳ ಡೇ ಕೇರ್ ಸೆಂಟರ್ನಲ್ಲಿ ವಿಷಕಾರಿ ಆಹಾರ ಸೇವಿಸಿ ಮೂವರು ಮಕ್ಕಳು ಅಸುನೀಗಿದ್ದರು. ಇದೀಗ ಚಿಕನ್ ಬಿರಿಯಾನಿ ತಿಂದು ಓರ್ವನ ಸಾವು ಸಂಭವಿಸಿ, ಹಲವರು ಅಸ್ವಸ್ಥರಾಗಿರುವುದು ಆಘಾತಕಾರಿಯಾಗಿದೆ. ತಿರುವರೂರು ತಾಲೂಕು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆಹಾರ ತಯಾರಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಯಾವುದೇ ಲೋಪ ಕಂಡು ಬಂದಲ್ಲಿ ತಯಾರಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಆಹಾರ ತಯಾರಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.