ಮಲಪ್ಪುರಂ, ಅ 07 (DaijiworldNews/HR): ಕುಟುಂಬ ನಿರ್ವಹಣೆಗಾಗಿ 2019ರಲ್ಲಿ ಶಾರ್ಜಾಕ್ಕೆ ತೆರಳಿದ್ದ ಯಾಕೂಬ್ ಅಕ್ತರ್(22) ಆತ ಕೆಲಸ ಮಾಡುತ್ತಿದ್ದ ಕಂಪನಿಯು ಕಾರ್ಯನಿರ್ವಹಿಸಲು ಅಧಿಕಾರವಿಲ್ಲದ ಪ್ರದೇಶದಲ್ಲಿ ಆಹಾರವನ್ನು ವಿತರಿಸಿದ್ದಕ್ಕಾಗಿ ಶಾರ್ಜಾ ಮುನಿಸಿಪಾಲಿಟಿ ಅಧಿಕಾರಿಗಳು ಆತನನ್ನು ಬಂಧಿಸಿದ್ದು, ಪುರಸಭೆಯು ಆತನಿಗೆ ದಂಡ ವಿಧಿಸಿತು.
ಅಗತ್ಯವಿರುವ ಪರವಾನಗಿಗಳು ಮತ್ತು ಅನುಮತಿಗಳನ್ನು ಪಡೆದುಕೊಳ್ಳುವುದು ಕಂಪನಿಯ ಜವಾಬ್ದಾರಿಯಾಗಿರುವುದರಿಂದ ಆತ ತನ್ನ ಕಂಪನಿಯನ್ನು ಸಂಪರ್ಕಿಸಿ ಘಟನೆ ಬಗ್ಗೆ ತಿಳಿಸಿದ್ದು, ಈ ವೇಳೆ ಆ ಪ್ರದೇಶದಲ್ಲಿ ಆಹಾರ ವಿತರಿಸಲು ಅಧಿಕಾರ ನೀಡಿರುವ ದಾಖಲೆಯನ್ನು ಕಂಪನಿ ನೀಡಿದ್ದು, ಯಾಕೂಬ್ ಅದನ್ನು ಪುರಸಭೆಯ ಅಧಿಕಾರಿಗಳ ಮುಂದೆ ಸಲ್ಲಿಸಿದ್ದಾರೆ. ಆದರೆ ಆ ದಾಖಲೆ ನಕಲಿ ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿದ ಯಾಕೂಬ್ ತಂದೆ ಯೂಸಫ್ ವಲಿಯಪೀಡಿಯಕ್ಕಲ್, ನನ್ನ ಮಗನನ್ನು ಜುಲೈ 19 ರಂದು ಜೈಲಿಗೆ ಹಾಕಲಾಗಿದ್ದು, ಅದಾದ ಒಂದು ವಾರದ ನಂತರ ನಮಗೆ ವಿಷಯ ತಿಳಿಯಿತು ಎಂದರು.
ಇನ್ನು ಯೂಸಫ್ ಅವರು ಸಹಾಯ ಕೋರಿ ನಾರ್ಕಾ ರೂಟ್ಸ್ ಉಪಾಧ್ಯಕ್ಷ ಪಿ ಶ್ರೀರಾಮಕೃಷ್ಣನ್ ಅವರನ್ನು ಸಂಪರ್ಕಿಸಿದ್ದು, ಅವರ ಸೂಚನೆ ಮೇರೆಗೆ, ನಾರ್ಕಾ ಅಧಿಕಾರಿಗಳು ಮತ್ತು ಯುಎಇಯಲ್ಲಿರುವ ಮಲಯಾಳಿ ಸಂಘಟನೆಗಳು ಕಾರ್ಯಾಚರಣೆ ನಡೆಸಿ ಯಾಕೂಬ್ನನ್ನು ಬಿಡುಗಡೆ ಮಾಡಿಸಿದ್ದಾರೆ.