ನವದೆಹಲಿ, ಅ 07 (DaijiworldNews/DB): ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಉದಯ್ ಉಮೇಶ್ ಲಲಿತ್ ಅವರು ನವೆಂಬರ್ 8ರಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯನ್ನು ನಾಮ ನಿರ್ದೇಶನ ಮಾಡುವಂತೆ ಕೇಂದ್ರ ಸರ್ಕಾರ ಕೇಳಿದೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕಾತಿ ಕಾರ್ಯವಿಧಾನದ ಮೆಮೊರಾಂಡಮ್ (MoP) ಪ್ರಕಾರ ಕೇಂದ್ರ ಕಾನೂನು ಸಚಿವಾಲಯವು ಮುಖ್ಯ ನ್ಯಾಯಾಧೀಶರಿಗೆ ಶುಕ್ರವಾರ ಪತ್ರ ಬರೆದಿದ್ದು, ಉತ್ತರಾಧಿಕಾರಿಯ ನೇಮಕಾತಿಗಾಗಿ ತಮ್ಮ ಶಿಫಾರಸುಗಳನ್ನು ಸಲ್ಲಿಸುವಂತೆ ತಿಳಿಸಿದೆ.
ಕಳೆದ ಆಗಸ್ಟ್ 26ರಂದು ನಿವೃತ್ತರಾದ ನ್ಯಾಯಮೂರ್ತಿ ಎನ್.ವಿ. ರಮಣ ಅವರ ಉತ್ತರಾಧಿಕಾರಿಯಾಗಿ ಯು.ಯು. ಲಲಿತ್ ಅವರು ಆಗಸ್ಟ್ 27 ರಂದು ಅಧಿಕಾರ ಸ್ವೀಕರಿಸಿದ್ದರು. ಹಿರಿತನದ ಮಾನದಂಡಗಳಿಗೆ ಅನುಗುಣವಾಗಿ ನ್ಯಾ. ಲಲಿತ್ ಅವರನ್ನು ಜ. ರಮಣ ಅವರು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸ್ಸು ಮಾಡಿದ್ದರು. ಆ ಬಳಿಕ ಈ ಆಯ್ಕೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೃಢಪಡಿಸಿದ್ದರು. ಅಧಿಕಾರ ಸ್ವೀಕರಿಸಿದ ಎರಡು ತಿಂಗಳಲ್ಲೇ ಅವರು ನಿವೃತ್ತಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಅವರ ಉತ್ತರಾಧಿಕಾರಿಯ ಹೆಸರು ಸೂಚಿಸುವಂತೆ ಕೇಂದ್ರ ಸರ್ಕಾರ ಕೇಳಿದೆ.
ಮುಖ್ಯ ನ್ಯಾಯಾಧೀಶ ಹುದ್ದೆಗೆ ಹಿರಿಯ ನ್ಯಾಯಾಧೀಶರನ್ನೇ ಪರಿಗಣಿಸುವ ಸಾಧ್ಯತೆ ಇದ್ದು, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನು ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.