ಲಖನೌ(ಉತ್ತರ ಪ್ರದೇಶ), ಅ 07 (DaijiworldNews/DB): ಅಯೋಧ್ಯೆ ರಾಮಮಂದಿರದ ನಿರ್ಮಾಣ ಕಾರ್ಯ ಶೇ.50ರಷ್ಟು ಪೂರ್ಣಗೊಂಡಿದ್ದು, 2024ರ ವರ್ಷಾಂತ್ಯಕ್ಕೆಪೂರ್ಣಗೊಳ್ಳುವ ನಿರೀಕ್ಷೆ ಇದೆ. 2024ರ ಮಕರ ಸಂಕ್ರಾಂತಿ ದಿನ ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಜೈಪುರದ ಪಂಚಖಂಡ ಪೀಠ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನ ಎಂಬ ಭಗವದ್ಗೀತೆಯಲ್ಲಿ ಬರುವ ಶ್ರೀಕೃಷ್ಣನ ಮಾತಿನಂತೆ 1949ರಿಂದ ಆರಂಭವಾದ ನಿರಂತರ ಶ್ರಮದ ಫಲವೇ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವುದು. ಅದರಂತೆ ನಿರ್ಮಾಣ ಕಾರ್ಯದ ಶೇ.50ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. 2024ರ ವೇಳೆಗೆ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದರು.
ದೇವಾಲಯದ ಅಡಿಪಾಯ ಕೆಲಸಗಳು ಪೂರ್ಣಗೊಂಡಿದೆ. ನೆಲಹಾಸು ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಅದಾದ ಬಳಿಕ ನೆಲ ಅಂತಸ್ತಿನ ಕಾಮಗಾರಿ ಆರಂಭವಾಗಲಿದೆ ಎಂದು ದೇವಸ್ಥಾನ ನಿರ್ಮಾಣ ಸಮಿತಿಯ ಸದಸ್ಯ ಗೋಪಾಲ್ ಈ ಹಿಂದೆ ಹೇಳಿದ್ದರು.
2024ರ ಸಂಕ್ರಾಂತಿಯಂದು ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಬಳಿಕ ನೆಲಮಹಡಿಯ ರಾಮಮಂದಿರಕ್ಕೆ ಭಕ್ತಾದಿಗಳಿಗೆ ಪ್ರವೇಶ ಕಲ್ಪಿಸುವ ಬಗ್ಗೆ ಯೋಜಿಸಲಾಗಿದೆ ಎಂದಿದ್ದರು.