ನವದೆಹಲಿ, ಅ 07 (DaijiworldNews/DB): ನಾನು ಹೆಂಡತಿಯ ಬೈಗುಳಕ್ಕಿಂತಲೂ ಲೆಫ್ಟಿನೆಂಟ್ ಜನರಲ್ ವಿ.ಕೆ. ಸಕ್ಸೇನಾ ಅವರ ಬೈಗಳ ತಿಂದಿರುವುದೇ ಹೆಚ್ಚು ಎಂದು ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಸಕ್ಸೇನಾ ಕಾಲೆಳೆದಿದ್ದಾರೆ.
ಎಲ್ಜಿ ಸಾಹೇಬರು ಕಳೆದ ಆರು ತಿಂಗಳಲ್ಲಿ ನನಗೆ ಬರೆದ ಲವ್ ಲೆಟರ್ಗಳಿಗೆ ಲೆಕ್ಕವಿಲ್ಲ. ನಿಜ ಹೇಳಬೇಕೆಂದರೆ ನನ್ನ ಪತ್ನಿಯೂ ಇಷ್ಟು ಪತ್ರಗಳನ್ನು ನನಗಾಗಿ ಬರೆದಿರಲಿಕ್ಕಿಲ್ಲ. ಬೈಯುವುದರಲ್ಲಿ ನನ್ನ ಹೆಂಡತಿಯನ್ನೇ ಅವರು ಮೀರಿಸಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ವಕಾಲತ್ತು ವಹಿಸುವ ಭರದಲ್ಲಿ ಅವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಕೇಜ್ರೀವಾಲ್ ಅವರು ಪತ್ನಿಗೆ ಹೋಲಿಕೆ ಮಾಡಿ ವಿ.ಕೆ. ಸಕ್ಸೇನಾ ಅವರನ್ನು ಕಾಲೆಳೆದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ, ಇದು ಅವಮಾನಕರ ಹೇಳಿಕೆ ಎಂದಿದೆ. ಎಲ್ಜಿ ಅವರನ್ನು ಅವಮಾನಿಸಲೆಂದೇ ಸಿಎಂ ಇಂತಹ ಹೇಳಿಕೆ ನೀಡಿದ್ದಾರೆ. ಅವರ ಆಡಳಿತದಲ್ಲಿ ಯಾವುದೇ ಜವಾಬ್ದಾರಿ ಪಡೆದುಕೊಳ್ಳದೆ, ಕೇವಲ ರಾಜಕೀಯ ಲಾಭ ನೋಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಆಪಾದಿಸಿದ್ದಾರೆ.
ಅವರು ಬಳಸಿರುವ ಭಾಷೆ ಅವರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಲೂಟಿ ಮಾಡುವುದು, ಸುಳ್ಳು ಹೇಳುವುದರಲ್ಲಿ ಮಾತ್ರ ಅವರಿಗೆ ಆಸಕ್ತಿ ಇದೆಯೇ ಹೊರತು ಅಭಿವೃದ್ದಿ ವಿಚಾರದಲ್ಲಿ ಇಲ್ಲ ಎಂದಿದ್ದಾರೆ.
ದೆಹಲಿಯ ರಾಜ್ಘಾಟ್ ಮತ್ತು ವಿಜಯ ಘಾಟ್ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳಲ್ಲಿ ಸಿಎಂ ಕೇಜ್ರೀವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಇಬ್ಬರೂ ಭಾಗವಹಿಸಬೇಕಿತ್ತಾದರೂ, ಇದರಲ್ಲಿ ಸಿಎಂ ಭಾಗಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಜಿ ಸಕ್ಸೇನಾ ಅವರು ಕೇಜ್ರೀವಾಲ್ಗೆ ಪತ್ರ ಬರೆದು ಕಾರ್ಯಕ್ರಮಕ್ಕೆ ಗೈರಾಗಿರುವುದನ್ನು ಖಂಡಿಸಿದ್ದರು.