ಅಹಮದಾಬಾದ್, ಅ 07 (DaijiworldNews/MS): ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿನಿಂದ ಗುಜರಾತ್ನಿಂದ ಪ್ರಚಾರ ಆರಂಭಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಅಹಮದಾಬಾದ್ಗೆ ತಲುಪಿದ್ದಾರೆ.
ಪ್ರಚಾರದ ಭಾಗವಾಗಿ ಅವರು ಅಹಮದಾಬಾದ್ನಲ್ಲಿರುವ ಸಬರಮತಿ ಆಶ್ರಮ ಮತ್ತು ಗುಜರಾತ್ ಕಾಂಗ್ರೆಸ್ನ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಕಚೇರಿಗೆ ಭೇಟಿ ನೀಡಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್ 30 ರಂದು ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.
ಈ ಬಾರಿ ಗಾಂಧಿ ಕುಟುಂಬದ ಯಾರೊಬ್ಬರೂ ಉನ್ನತ ಹುದ್ದೆಗೆ ಸ್ಪರ್ಧಿಸದ ಕಾರಣ,ಕಾಂಗ್ರೆಸ್ ಪಕ್ಷವು 25 ವರ್ಷಗಳ ನಂತರ ಗಾಂಧಿಯೇತರ ಅಧ್ಯಕ್ಷರನ್ನು ಪಡೆಯಲು ಸಿದ್ಧವಾಗಿದೆ.
ಅಧ್ಯಕ್ಷೀಯ ಸ್ಥಾನದ ರೇಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಇದ್ದಾರೆ. ಈ ಹಿಂದೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಒಮ್ಮತದಿಂದ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ ಎಂಬುದು ಅಧಿಕೃತವಾಗುವಂತಿತ್ತು. ಆದರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಚಿನ್ ಪೈಲಟ್ ಆ ಸ್ಥಾನಕ್ಕೆ ಏರುತ್ತಾರೆ ಎಂಬ ಸುಳಿವಿನ ಬೆನ್ನಲ್ಲೆ ಬಂಡಾಯ ಪ್ರಾರಂಭವಾಗಿ ಗೆಹ್ಲೋಟ್ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಕ್ಷಮೆಯಾಚಿಸಿ, ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.