ನವದೆಹಲಿ, ಅ 06 (DaijiworldNews/DB): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಕೀಳು ಮಟ್ಟದ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಉದಿತ್ ರಾಜ್ ವಿರುದ್ದ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ದೇಶದ ಮೊದಲ ಆದಿವಾಸಿ ರಾಷ್ಟ್ರಪತಿಯಾಗಿ ಮುರ್ಮು ಅವರು ಗುರುತಿಸಿಕೊಂಡಿದ್ದಾರೆ. ಅವರಿಗೆ ಅವಮಾನ ಮಾಡುವುದು ಸಲ್ಲದು. ಉದಿತ್ ರಾಜ್ ಹಾಗೂ ಕಾಂಗ್ರೆಸ್ ಕೂಡಲೇ ರಾಷ್ಟ್ರಪತಿಯವರ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಇನ್ನು ರಾಷ್ಟ್ರಪತಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಉದಿತ್ ರಾಜ್ ಅವರಿಗೆ ನೋಟಿಸ್ ನೀಡಲು ರಾಷ್ಟ್ರೀಯ ಮಹಿಳಾ ಆಯೋಗ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಬಿಜೆಪಿ ಸದಸ್ಯರಾಗಿದ್ದ ಉದಿತ್ ರಾಜ್ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಮೋದಿ ತವರು ರಾಜ್ಯ ಗುಜರಾತ್ನಲ್ಲಿ ಇತ್ತೀಚೆಗೆ ಮಾತನಾಡಿದ್ದ ರಾಷ್ಟ್ರಪತಿ ಮುರ್ಮು ಅವರು, ದೇಶದಲಿ ಉತ್ಪಾದನೆಯಾಗುವ ಒಟ್ಟು ಉಪ್ಪಿನ ಪೈಕಿ ಶೇ 76ರಷ್ಟು ಗುಜರಾತ್ನಲ್ಲೇ ಉತ್ಪಾದನೆಯಾಗುತ್ತದೆ. ಹೀಗಾಗಿ ಗುಜರಾತ್ನ ಉಪ್ಪನ್ನೇ ದೇಶದ ಜನ ರುಚಿ ನೋಡುತ್ತಾರೆ ಎಂದಿದ್ದರು. ಈ ಹೇಳಿಕೆ ಬಗ್ಗೆ ಉದಿತ್ ರಾಜ್ ಅತಿರೇಕದ ಚಮಚಾಗಿರಿ ಎಂದಿದ್ದರು.