ಗಾಂಧಿನಗರ, ಅ 06 (DaijiworldNews/DB): ಗಾಂಧಿನಗರ-ಮುಂಬೈ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ಗುಜರಾತ್ನ ವತ್ವಾ ರೈಲು ನಿಲ್ದಾಣದ ಬಳಿ ಟ್ರ್ಯಾಕ್ನಲ್ಲಿ ಎಮ್ಮೆಗಳಿಗೆ ಢಿಕ್ಕಿಯಾಗಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿವೆ.
ಗುರುವಾರ (ಇಂದು) ಬೆಳಗ್ಗೆ 11.15ರ ಸುಮಾರಿಗೆ ಗೈರತ್ಪುರ-ವತ್ವಾ ನಿಲ್ದಾಣದ ನಡುವೆ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ರೈಲಿನ ಮುಂಭಾಗಕ್ಕೂ ಹಾನಿ ಸಂಭವಿಸಿದೆ. ವತ್ವಾ ಬಳಿ ಮುಂದೆ ಸಂಚರಿಸುವಾಗ ತಿರುವೊಂದು ಸಿಗುತ್ತದೆ. ಅಲ್ಲಿ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಸುಮಾರು 100 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದ್ದ ರೈಲಿ ಇದೇ ತಿರುವು ಬಳಿ ಎಮ್ಮೆಗಳಿಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಫೈಬರ್ನಿಂದ ನಿರ್ಮಿಸಿರುವ ರೈಲು ಹಾನಿಗೊಳಗಾಗಿದೆ ಎಂದು ತಿಳಿದು ಬಂದಿದೆ.
ಎಮ್ಮೆಗಳ ಮೃತದೇಹಗಳನ್ನು ಹಳಿಗಳಿಂದ ಪಕ್ಕಕ್ಕೆ ಸರಿಸಿದ ಬಳಿಕ ರೈಲು ಗಾಂಧಿನಗರಕ್ಕೆ ಸಂಚರಿಸಿದೆ. ಜಾನುವಾರುಗಳನ್ನು ರೈಲ್ವೇ ಟ್ರಾಕ್ ಬಳಿ ಬಿಡದಂತೆ ಇದೇ ವೇಳೆ ಗ್ರಾಮಸ್ಥರಿಗೆ ರೈಲ್ವೇ ಅಧಿಕಾರಿಗಳು ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಕಳೆದ ಒಂದು ವಾರದ ಹಿಂದಷ್ಟೇ ಭಾರತೀಯ ರೈಲ್ವೇ ಇಲಾಖೆಯು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಆರಂಭಿಸಿತ್ತು. ಅಷ್ಟರಲ್ಲಾಗಲೇ ಈ ಅಪಘಾತ ನಡೆದಿದೆ.