ಗದಗ, ಅ 06 (DaijiworldNews/DB): ಸಾರಿಗೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಜೈ ಮಹಾರಾಷ್ಟ್ರ ರಾಜ್ಯ ಪರಿವಾಹನ್ ಮುದ್ರಿತ ಟಿಕೆಟ್ನ್ನು ಬಸ್ ಪ್ರಯಾಣಿಕರಿಗೆ ನೀಡಿದ ಘಟನೆ ಗದಗದಲ್ಲಿ ನಡೆದಿದ್ದು, ಇದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಯಿತು.
ಗದಗ ಹಳೆ ಬಸ್ ನಿಲ್ದಾಣದಿಂದ ಹಳ್ಳಿಗಳಿಗೆ ತೆರಳುವ ಬಸ್ಗಳಲ್ಲಿ ಪ್ರಯಾಣಿಕರಿಗೆ ವಿತರಿಸಲಾದ ಟಿಕೆಟ್ಗಳಲ್ಲಿ ಮರಾಠಿ ಭಾಷೆಯಲ್ಲಿ ಜೈ ಮಹಾರಾಷ್ಟ್ರ ಪರಿವಾಹನ್ ಎಂದು ಮುದ್ರಿತವಾಗಿತ್ತು. ಇದನ್ನು ನೋಡಿದ ಪ್ರಯಾಣಿಕರು ಕೂಡಲೇ ಕನ್ನಡಪರ ಸಂಘಟನೆಗಳಿಗೆ ಮಾಹಿತಿ ನೀಡಿದ್ದಾರೆ. ನಿಲ್ದಾಣಕ್ಕೆ ದೌಡಾಯಿಸಿದ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಕೂಡಲೇ ಎಚ್ಚೆತ್ತ ಡಿಪೋ ಕಂಟ್ರೋಲರ್ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸ್ಟೋರೂಂನಲ್ಲಿದ್ದ ಬಾಕ್ಸ್ಗಳನ್ನು ತೆರೆದು ನೋಡಿದಾಗ ಕೆಲವು ಬಾಕ್ಸ್ಗಳು ಮಹಾರಾಷ್ಟ್ರ ಸಾರಿಗೆ ಇಲಾಖೆಗೆ ಸಂಬಂಧಿಸಿರುವುದು ಗೊತ್ತಾಗಿತ್ತು. ಕೂಡಲೇ ಕನ್ನಡ ಇರುವ ಟಿಕೆಟ್ ರೋಲ್ಗಳನ್ನು ಕಂಡಕ್ಟರ್ಗಳಿಗೆ ನೀಡಲಾಯಿತು.
ಆಂಧ್ರ ಮೂಲದ ಖಾಸಗಿ ಕಂಪನಿಯೊಂದು ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾರಿಗೆ ಇಲಾಖೆಗಳಿಗೆ ಟಿಕೆಟ್ ರೋಲ್ ಮುದ್ರಿಸಿ ಪೂರೈಕೆ ಮಾಡುವ ಗುತ್ತಿಗೆ ಸಂಸ್ಥೆಯಾಗಿದೆ. ಮಹಾರಾಷ್ಟ್ರಕ್ಕೆ ಹೋಗಬೇಕಿದ್ದ ರೋಲ್ವೊಂದು ತಪ್ಪಿ ಗದಗಕ್ಕೆ ಬಂದಿರುವುದೇ ಗೊಂದಲಕ್ಕೆ ಕಾರಣವಾಗಿದೆ ಎಂದು ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.