ಬೆಂಗಳೂರು, ಅ 06 (DaijiworldNews/DB): ಸಾಕುನಾಯಿಯೊಂದಿಗೆ ಇನ್ನೊಂದು ಮನೆಯ ಸಾಕುನಾಯಿ ಜಗಳವಾಡಿದಕ್ಕಾಗಿ ಮೂವರು ವ್ಯಕ್ತಿಗಳು ಸಾಕುನಾಯಿ ಹಾಗೂ ಅದರ ಮಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೂರ್ವದ ಮಂಜುನಾಥ ಲೇಔಟ್ನಲ್ಲಿ ಘಟನೆ ನಡೆದಿದ್ದು, ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರ್.ಕೆ. ಪುರಂನ ಗದ್ದಿಗೆಪ್ಪ ಎಂಬವರು ತಮ್ಮ ಮನೆಯ ಸಾಕುನಾಯಿ ಅಚ್ಚುವನ್ನು ಆಟವಾಡಲೆಂದು ಸೋಮವಾರ ಬೆಳಗ್ಗೆ ಮನೆಯ ಹೊರಗೆ ಬಿಟ್ಟಿದ್ದರು. ಈ ವೇಳೆ ಅದು ನೆರೆಮನೆಯ ನಾಗರಾಜ್ ಎಂಬವರ ಮನೆಯ ಸಾಕುನಾಯಿಯೊಂದಿಗೆ ಜಗಳವಾಡಿದೆ. ಕೂಡಲೇ ಗದ್ದಿಗೆಪ್ಪ ಅಚ್ಚುನನ್ನು ಎಳೆದು ಮನೆಗೆ ಕರೆ ತಂದಿದ್ದಾರೆ. ಆದರೆ ನೆರೆಮನೆಯ ರಂಜಿತ್, ರಾಹುಲ್ ಮತ್ತು ರಜತ್ ಅವರು ರಾತ್ರಿ ವೇಳೆ ಗದ್ದಿಗೆಪ್ಪ ಅವರ ಮನೆಗೆ ನುಗ್ಗಿ ನಾಯಿಗೆ ಕೋಲಿನಿಂದ ಥಳಿಸಿದ್ದಲ್ಲದೆ, ನಾಯಿಯ ರಕ್ಷಣೆಗೆ ಬಂದ ಮಾಲಕ ಗದ್ದಿಗೆಪ್ಪ ಅವರಿಗೂ ಹಲ್ಲೆ ನಡೆಸಿದ್ದಾರೆ.
ಘಟನೆ ಸಂಬಂಧ ಗದ್ದಿಗೆಪ್ಪ ಅವರು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದು, ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮೂವರು ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್ಗಳ ಅಡಿಯಲ್ಲಿ, ಸ್ವಯಂಪ್ರೇರಣೆಯಿಂದ ಪ್ರಾಣಿಗಳನ್ನು ಗಾಯಗೊಳಿಸುವುದು, ಕೊಲ್ಲುವುದು ಅಥವಾ ಅಂಗವಿಕಲಗೊಳಿಸುವುದು, ಸುಲಿಗೆ, ಕ್ರಿಮಿನಲ್ ಬೆದರಿಕೆ ಇತ್ಯಾದಿ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ವ್ಯಕ್ತಿಯೊಬ್ಬರು ಘಟನೆಯ ವೀಡಿಯೋ ಮಾಡಿದ್ದು, ನಾಯಿಯ ಮೇಲಾದ ದಾಳಿಯಿಂದಾಗಿ ಅದು ನೋವಿನಿಂದ ನರಳುವುದು ಕಂಡು ಬಂದಿದೆ. ಹಲ್ಲೆಯಿಂದಾಗಿ ಚಿಂತಾಜನ ಸ್ಥಿತಿಯಲ್ಲಿರುವ ಅಚ್ಚುವನ್ನು ದೊಮ್ಮಲೂರಿನ ಪಶು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀದಿನಾಯಿಯಾಗಿದ್ದ ಅಚ್ಚುವನ್ನು ದತ್ತು ಪಡೆದು ಗದ್ದಿಗೆಪ್ಪ ಸಾಕುತ್ತಿದ್ದರು ಎಂದು ತಿಳಿದು ಬಂದಿದೆ.