ಪಂಜಾಬ್, ಅ 06 (DaijiworldNews/DB): ಭಾರತ ಮೂಲದ ಕುಟುಂಬ ಕ್ಯಾಲಿಫೋರ್ನಿಯಾದಲ್ಲಿ ಹತ್ಯೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಗುರುವಾರ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾಲ್ವರು ಭಾರತೀಯರನ್ನು ಅಪಹರಿಸಿ ಹತ್ಯೆ ಮಾಡಿರುವ ಸುದ್ದಿ ಆಘಾತಕಾರಿಯಾಗಿದೆ. ಎಂಟು ತಿಂಗಳ ಹೆಣ್ಣು ಮಗುವನ್ನು ಕೂಡಾ ದುಷ್ಟರು ನಿರ್ದಯವಾಗಿ ಕೊಂದಿರುವುದು ದುಃಖ ತಂದಿದೆ. ಸಂತ್ರಸ್ತ ಕುಟುಂಬಗಳ ದುಃಖದ ಬಗ್ಗೆ ಅರಿವಿದೆ. ಕ್ಯಾಲಿಫೋರ್ನಿಯಾದಲ್ಲಿ ಭಾರತೀಯರನ್ನು ಹತ್ಯೆಗೈದಿರುವ ವಿಚಾರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಪತಿ, ಪತ್ನಿ, ಎಂಟು ತಿಂಗಳ ಮಗು ಮತ್ತು ಇನ್ನೋರ್ವ ವ್ಯಕ್ತಿ ಸಹಿತ ನಾಲ್ವರನ್ನು ಬಂದೂಕು ತೋರಿಸಿ ವ್ಯಕ್ತಿಯೊಬ್ಬ ಅಪಹರಣ ಮಾಡಿದ್ದ. ಇವರೆಲ್ಲರೂ ಪಂಜಾಬ್ ಮೂಲದವರಾಗಿದ್ದು ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದರು. ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯ ದೂರದ ತೋಟದಲ್ಲಿ ನಾಲ್ವರ ಶವ ಪತ್ತೆಯಾಗಿತ್ತು.