ಫರೀದಾಬಾದ್, ಅ 06 (DaijiworldNews/DB): ಭೂಗತ ಒಳಚರಂಡಿ ಶುಚಿತ್ವದ ವೇಳೆ ವಿಷಕಾರಿ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ನಾಲ್ವರು ನೈರ್ಮಲ್ಯ ಕಾರ್ಮಿಕರು ಸಾವನ್ನಪ್ಪಿದ ಘಟನೆ ಫರೀದಾಬಾದ್ನ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ದೆಹಲಿಯ ದಕ್ಷಿಣಪುರಿ ಸಂಜಯ್ ಕ್ಯಾಂಪ್ ನಿವಾಸಿಗಳಾದ ರೋಹಿತ್, ಆತನ ಸಹೋದರ ರವಿ, ವಿಶಾಲ್ ಮತ್ತು ರವಿ ಗೋಲ್ಡರ್ ಮೃತ ದುರ್ದೈವಿಗಳು. ಇವರೆಲ್ಲರೂ ಸಂತೋಷ್ ಅಲೈಡ್ ಸರ್ವೀಸ್ ಹೆಸರಿನ ಏಜೆನ್ಸಿಯೊಂದರ ಮುಖಾಂತರ ಫರೀದಾಬಾದ್ ಸೆಕ್ಟರ್ 16ರಲ್ಲಿರುವ ಕ್ಯೂಆರ್ಜಿ ಆಸ್ಪತ್ರೆಗೆ ಭೂಗತ ಒಳಚರಂಡಿ ಶುಚಿತ್ವಕ್ಕಾಗಿ ಬಂದಿದ್ದರು. ನಾಲ್ವರು ಯಾವುದೇ ಕನಿಷ್ಠ ಭದ್ರತೆಯೂ ಇಲ್ಲದೆ ಮ್ಯಾನ್ಹೋಲ್ಗೆ ಶುಚಿತ್ವಕ್ಕಾಗಿ ಇಳಿದಿದ್ದರು. ಈ ವೇಳೆ ವಿಷಯಕಾರಿ ಅನಿಲ ಸೋರಿಕೆಯಾಗಿ ನಾಲ್ವರಿಗೂ ಉಸಿರಾಟ ಕಷ್ಟವಾಗಿದ್ದು, ಪ್ರಜ್ಞೆ ತಪ್ಪಿದ್ದಾರೆ. ಇದಕ್ಕೂ ಮುನ್ನ ಸಹಾಯಕ್ಕಾಗಿ ಕೂಗಿಕೊಂಡಿದ್ದು, ತತ್ಕ್ಷಣ ಆಸ್ಪತ್ರೆ ಸಿಬಂದಿ ಓಡಿ ಬಂದಿದ್ದಾರೆ. ಕೂಡಲೇ ನಾಲ್ವರನ್ನು ಅಲ್ಲಿಂದ ಹೊರಗೆಳೆದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸ್ವಲ್ಪ ಹೊತ್ತಿನಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಸೆಂಟ್ರಲ್ ಎಸಿಪಿ ಮಹೀಂದರ್ ವರ್ಮಾ ತಿಳಿಸಿರುವುದಾಗಿ ವರದಿಯಾಗಿದೆ.
ನಾಲ್ವರ ಮೃತದೇಹಗಳನ್ನು ಬಾದ್ಶಾ ಖಾನ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು, ಕುಟುಂಬಿಕರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ ನಾಲ್ವರು ಕೂಡಾ ಪ್ರತಿ ತಿಂಗಳು ಶುಚಿತ್ವ ಕೆಲಸಕ್ಕಾಗಿ ಆಸ್ಪತ್ರೆಗೆ ಬರುತ್ತಿದ್ದರು ಎನ್ನಲಾಗಿದೆ. ಘಟನೆಗೆ ಏಜೆನ್ಸಿಯೇ ಕಾರಣವಾಗಿದ್ದು, ಏಜೆನ್ಸಿ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಸ್ಪತ್ರೆ ಆಡಳಿತ ಒತ್ತಾಯಿಸಿದೆ ಎಂದು ತಿಳಿದು ಬಂದಿದೆ.