ಭುಜ್ (ಗುಜರಾತ್), ಅ 06 (DaijiworldNews/DB): ರಾವಣನ ಪ್ರತಿಕೃತಿ ದಹಿಸುವ ಮೂಲಕ ದುಷ್ಟ ಶಕ್ತಿಗಳ ಸಂಹಾರ ಮಾಡುವುದು ದಸರಾ ವೇಳೆ ಸಾಮಾನ್ಯ. ಆದರೆ ಗುಜರಾತ್ನಲ್ಲಿ ಕಾಂಗ್ರೆಸ್ಸಿಗರು ರಾವಣನ ಪ್ರತಿಕೃತಿ ಬದಲು ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಹಣದುಬ್ಬರದ ಪ್ರತಿಕೃತಿಯನ್ನು ದಹಿಸಿದ ಘಟನೆ ನಡೆದಿದೆ.
ಗುಜರಾತ್ನ ಭುಜ್ನಲ್ಲಿ ಕೇಂದ್ರದ ವಿರುದ್ದ ಘೋಷಣೆ ಕೂಗಿದ ಕೈ ಕಾರ್ಯಕರ್ತರು, ಕೇಂದ್ರವು ವಿಪಕ್ಷಗಳ ಧ್ವನಿ ಅಡಗಿಸಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಬೆಲೆ ಏರಿಕೆ, ಹಣದುಬ್ಬರ, ಆರೋಗ್ಯ ಸೌಲಭ್ಯಗಳಿಲ್ಲದಿರುವಿಕೆ, ಶಿಕ್ಷಣ ದುಬಾರಿಯಾಗಿರುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಇಡಿ, ಸಿಬಿಐ ಪ್ರತಿಕೃತಿ ದಹಿಸಿದರು ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ನ ಕೆಲ ಮುಖಂಡರಿಗೆ ಇಡಿ ಸಮನ್ಸ್ ಜಾರಿ ಮಾಡುವುದು, ಮನೆ ಮೇಲೆ ಸಿಬಿಐ ದಾಳಿ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಇಡಿ, ಸಿಬಿಐ ಪ್ರತಿಕೃತಿ ದಹಿಸಿರುವುದಾಗಿ ವರದಿಯಾಗಿದೆ.