ಮೈಸೂರು, ಅ 06 (DaijiworldNews/DB): ಭಾರತ್ ಜೋಡೋ ಯಾತ್ರೆ ವಿರಾಮದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಪುತ್ರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಾಗರಹೊಳೆ ಸಫಾರಿಗೆಂದು ತೆರಳಿದ್ದ ವೇಳೆ ಮರಿ ಆನೆಯೊಂದು ಗಾಯಗೊಂಡಿರುವನ್ನು ಗಮನಿಸಿದ ರಾಜುಲ್ ಗಾಂಧಿ ಮುಖ್ಯಮಂತ್ರಿಯವರಿಗೆ ಈ ಕುರಿತು ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ತಾಯಿ ಆನೆಯೊಂದಿಗಿದ್ದ ಮರಿಯಾನೆಯ ಸೊಂಡಿಲು ಹಾಗೂ ಬಾಲಕ್ಕೆ ಗಾಯವುಂಟಾಗಿತ್ತು. ಅಲ್ಲದೆ, ಗಾಯದ ತೀವ್ರತೆಗೆ ಮರಿ ಆನೆ ಸಾವು-ಬದುಕಿನ ನಡುವೆ ಹೋರಾಡುತ್ತಿತ್ತು. ಇದನ್ನು ನೋಡಿದ ರಾಹುಲ್ ಗಾಂಧಿಯವರು ಬೇಸರ ವ್ಯಕ್ತಪಡಿಸಿದ್ದು, ಕೂಡಲೇ ಮರಿ ಆನೆಯ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.
ಅಳಿವಿನಂಚಿನಲ್ಲಿರುವ ಪ್ರಬೇಧದ ಜೀವಿಗಳ ಬಗ್ಗೆ ಯೋಚಿಸಬೇಕು. ಮರಿಯಾನ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ತಾಯಿ ಆನೆ ಅಸಹಾಯಕವಾಗಿ ನಿಂತಿದೆ. ತುರ್ತು ವೈದ್ಯಕೀಯ ನೆರವು ಮರಿಯಾನೆಗೆ ಅಗತ್ಯವಾಗಿ ಬೇಕಾಗಿದೆ. ರಾಜಕೀಯ ಗಡಿಗಳನ್ನು ಮೀರಿ ನಿಮ್ಮಲ್ಲಿ ಮರಿ ಆನೆಯ ಚಿಕಿತ್ಸೆಗಾಗಿ ನಾನು ವಿನಂತಿಸುತ್ತಿದ್ದೇನೆ. ಮರಿಯಾನೆ ಜೀವಂತವಾಗಿ ಉಳಿಯಬೇಕಾದರೆ ಅದಕ್ಕೆ ಚಿಕಿತ್ಸೆ ಅಗತ್ಯವಾಗಿದೆ. ಆ ಜೀವ ಉಳಿಸಲು ನೀವೂ ಸಕಾಲಕ್ಕೆ ನೆರವು ನೀಡುತ್ತೀರೆಂಬ ಭರವಸೆ ಇದೆ ಎಂದು ಪತ್ರದಲ್ಲಿ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.