ಬೆಂಗಳೂರು, ಅ 06(DaijiworldNews/MS): ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಭಾರತ್ ಜೋಡೋ ಕರ್ನಾಟಕ ಯಾತ್ರೆಯ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಾಯಕತ್ವ ಸಾಬೀತುಪಡಿಸಲು ಹಾಗೂ ಬಲಪ್ರದರ್ಶನಕ್ಕೆ ಮುಂದಾಗಿದ್ದು ಇದಕ್ಕಾಗಿ ರಾಜ್ಯದಲ್ಲಿ ರಥಯಾತ್ರೆ ನಡೆಸಲು ಚಿಂತನೆ ರೂಪಿಸಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಇದು ರಾಜ್ಯದಿಂದ ತೆರಳಿದ ತಕ್ಷಣವೇ ತಮ್ಮ ರಥಯಾತ್ರೆ ಸಂಬಂಧ ಕಾರ್ಯ ಯೋಜನೆ ರೂಪಿಸಲಿದ್ದಾರೆ ಎನ್ನಲಾಗಿದೆ
ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಯಶಸ್ಸಿನ ಬೆನ್ನಲ್ಲೇ ಸಿದ್ದರಾಮಯ್ಯ ಅವರು ರಥಯಾತ್ರೆಗೆ ಪ್ಲ್ಯಾನ್ ನಡೆಸಿದ್ದಾರೆ ಎನ್ನಲಾಗಿದ್ದು, ಇದಕ್ಕಾಗಿ ವಿಶೇಷ ವಾಹನವೂ ತಯಾರಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ರಾಜ್ಯದಿಂದ ತೆರಳಿದ ಬಳಿಕ ರಾಜ್ಯಾದ್ಯಂತ ರಥಯಾತ್ರೆ ಆರಂಭಗೊಳ್ಳಲಿದೆ ಮೂಲಗಳು ತಿಳಿಸಿವೆ.
ರಥಯಾತ್ರೆ ಮೂಲಕ ಸಿದ್ದರಾಮಯ್ಯ ಅವರು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಸಂಚಾರ ಮಾಡಲಿದ್ದು ಇದು ಯಶಸ್ವಿಯಾದರೆ ಪಕ್ಷ ಅಧಿಕಾರಕ್ಕೆ ಬಂದು ತಮಗೆ ನಿರ್ಣಾಯಕ ಜವಾಬ್ದಾರಿ ನೀಡಲಿದೆ ಎಂಬ ವಿಶ್ವಾಸ ಸಿದ್ದರಾಮಯ್ಯ ಹೊಂದಿದ್ದಾರೆ.