ಎರ್ನಾಕುಲಂ, ಅ 06 (DaijiworldNews/MS): ಎರ್ನಾಕುಲಂನ ವಡಕ್ಕೆಂಚೇರಿಯಲ್ಲಿ ಮುಲಾಂತುರುತಿಯ ಬಸೆಲಿಯಸ್ ಶಾಲೆಯಿಂದ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಟೂರಿಸ್ಟ್ ಬಸ್ ಗುರುವಾರ ಕೆಎಸ್ಆರ್ಟಿಸಿ ಬಸ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.
ಟೂರಿಸ್ಟ್ ಬಸ್ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿದ್ದಾಗ ನಿಯಂತ್ರಣ ತಪ್ಪಿ ಕೆಎಸ್ ಆರ್ ಟಿಸಿ ಬಸ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಈ ವೇಳೆ ಟೂರಿಸ್ಟ್ ಬಸ್ ನಿಯಂತ್ರಣ ತಪ್ಪಿ ಸಮೀಪದ ಜೌಗು ಪ್ರದೇಶಕ್ಕೆ ಉರುಳಿ ಬಿದ್ದಿದೆ.
ವಾಳಯಾರ್-ವಡಕ್ಕೆಂಚೇರಿ ರಾಷ್ಟ್ರೀಯ ಹೆದ್ದಾರಿಯ ಅಂಜುಮೂರ್ತಿ ಮಂಗಲಂ ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ.
ಟೂರಿಸ್ಟ್ ಬಸ್ನಲ್ಲಿ 41 ವಿದ್ಯಾರ್ಥಿಗಳು, ಐವರು ಶಿಕ್ಷಕರು ಮತ್ತು ಬಸ್ನ ಇಬ್ಬರು ನೌಕರರಿದ್ದರು. ಕೆಎಸ್ಆರ್ಟಿಸಿ ಬಸ್ನಲ್ಲಿ 49 ಜನ ಪ್ರಯಾಣಿಕರಿದ್ದರು.
ಮೃತರನ್ನು ಶಾಲಾ ಶಿಕ್ಷಕಿ ವಿಷ್ಣು ವಿಕೆ ಮತ್ತು ವಿದ್ಯಾರ್ಥಿಗಳಾದ ಅಂಜನಾ ಅಜಿತ್, ಇಮ್ಯಾನುಯೆಲ್ ಸಿಎಸ್, ದಿಯಾ ರಾಜೇಶ್, ಕ್ರಿಸ್ ವಿಂಟರ್ಬೋರ್ನ್ ಥಾಮಸ್, ಎಲ್ನಾ ಜೋಸ್ (ವಿದ್ಯಾರ್ಥಿಗಳು) ಮತ್ತು ಕೊಲ್ಲಂನ ವಲಿಯೋಡೆ ನಿವಾಸಿ ಅನೂಪ್ (22), ರೋಹಿತ್ ರಾಜ್ (24) ಮತ್ತು ದೀಪು (KSRTC ಪ್ರಯಾಣಿಕರು) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದು, 28 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಸೆಲಿಯಸ್ ಶಾಲೆಯ 10, 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಊಟಿಗೆ ಪ್ರವಾಸಕ್ಕೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.