ಮೈಸೂರು, ಅ 04 (DaijiworldNews/DB): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಯಶಸ್ವಿಯಾಗು ಮುನ್ನಡೆಯುತ್ತಿದ್ದು, ನಾಲ್ಕನೇ ದಿನವಾದ ನಿನ್ನೆ ರಾಹುಲ್ ಗಾಂಧಿ ವಿವಿಧ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿ ಸಾಮಾಜಿಕ ಸಾಮರಸ್ಯದ ಸಂದೇಶ ರವಾನೆ ಮಾಡಿದ್ದಾರೆ.
ಹಾರ್ಡಿಂಗ್ ವೃತ್ತದಿಂದ ರಾಹುಲ್ ಪಾದಯಾತ್ರೆ ಆರಂಭಿಸಿದರು. ಸಿವಿಲ್ ಸೊಸೈಟಿ ಸದಸ್ಯರು ಹಾಗೂ ಬೆಳಗ್ಗೆ ವಾಕಿಂಗ್ನಿರತರಾಗಿದ್ದವರೊಂದಿಗೆ ಹೆಜ್ಜೆ ಹಾಕಿದರು. ವಿವಿಧ ಜಾನಪದ ತಂಡ, ನೃತ್ಯ ತಂಡಗಳು ಕೂಡಾ ಪಾದಯಾತ್ರೆಯಲ್ಲಿ ಸೇರಿ ಮೈಸೂರಿನ ರಸ್ತೆಗಳಲ್ಲಿ ಪ್ರದರ್ಶನ ನೀಡಿದ್ದು, ದಸರಾ ಮೆರುಗನ್ನು ಇನ್ನಷ್ಟು ಹೆಚ್ಚಿಸಿತ್ತು. ಪಾದಯಾತ್ರೆಯ ಜೊತೆಗೇ ವಿವಿಧ ಧರ್ಮಗಳ ಧರ್ಮಗುರುಗಳನ್ನು ಭೇಟಿಯಾದ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸಿದರು.
ಜೆಎಸ್ಎಸ್ ಧರ್ಮಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಮಸೀದಿ-ಎ-ಅಜಮ್ ಬಳಿ ಮೌಲ್ವಿಗಳು, ಮೈಸೂರು ಬಿಷಪ್ ಮತ್ತು ಜೈನ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದರು. ಅಲ್ಲದೆ ಇದೇ ವೇಳೆ ಮಹಿಳೆಯರು, ಯುವಕರು, ಇಸ್ಕಾನ್ ಪ್ರತಿನಿಧಿಗಳು ಸೇರಿದಂತೆ ಹಲವರು ಭಾರತ್ ಜೋಡೋ ಧ್ವಜಗಳೊಂದಿಗೆ ನಿಂತಿದ್ದರು. ಸಾಮಾಜಿಕ ಸಾಮರಸ್ಯ ಅತೀ ಅಗತ್ಯವಾಗಿದೆ. ಕೋಮು ಸೌಹಾರ್ದತೆ ಮತ್ತು ಜಾತ್ಯಾತೀತತೆ ದೇಶದಲ್ಲಿ ಪಸರಿಸಿದಾಗ ಶಾಂತಿಯುತವಾಗಿ ಬದುಕುವುದು ಸಾಧ್ಯವಾಗುತ್ತದೆ. ದೇಶದ ಪ್ರಗತಿಯೂ ಇದರಿಂದಲೇ ಸಾಧ್ಯ. ಸಾಮರಸ್ಯದ ಸಂದೇಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಈ ವೇಳೆ ಮನವಿ ಮಾಡಿದರು.