ಬೆಂಗಳೂರು, ಅ 04 (DaijiworldNews/MS): ಕಾಂಗ್ರೆಸ್ ಮತ್ತು ಜಿಹಾದಿ ಸಂಘಟನೆಗಳು ಒಂದೇ ನಾಣ್ಯದ ಎರಡು ಮುಖಗಳು ಇಬ್ಬರದ್ದೂ ಒಂದೇ ಧ್ಯೇಯ, ಅದು ದೇಶವನ್ನು ತುಂಡರಿಸುವುದು ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, " ಸಹಜ ದೇಶವಾಸಿಗಳ ಸೋಗಿನಲ್ಲಿ ದೇಶದಲ್ಲಿ ಆಂತರಿಕ ಭಯೋತ್ಪಾದನೆ ಸೃಷ್ಟಿಸುವ ಹುನ್ನಾರ ನಡೆಸಿದ ಜಿಹಾದಿ ಸಂತತಿಯ ಪಿಎಫ್ಐ ಸೇರಿದಂತೆ ಸಮಾಜ ಘಾತುಕ ಸಂಘಟನೆಗಳನ್ನು ಮೋದಿ ಸರ್ಕಾರ ನಿಷೇಧಿಸಿದೆ. ಜಿಹಾದಿ ಮನಸ್ಥಿತಿ ನೆಲೆಯೂರುವಲ್ಲಿ ಕಾಂಗ್ರೆಸ್ ಪಕ್ಷದ ಸಹಕಾರವಿದೆ. ಇವರ ಉಗ್ರ ಚಟುವಟಿಕೆಗೆ ಬೆನ್ನೆಲುಬಾಗಿ ನಿಂತಿದ್ದೇ ಕಾಂಗ್ರೆಸ್, ಉಗ್ರ ಭಾಗ್ಯ ಎಂದು ಹ್ಯಾಷ್ ಟ್ಯಾಗ್ ಬಳಸಿದೆ.
ಮತ್ತೊಂದು ಟ್ವೀಟ್ ನಲ್ಲಿ , " ದೇಶದಲ್ಲಿ ನಕಲಿ ಗಾಂಧಿ ಕುಟುಂಬ ಉಗ್ರವಾದವನ್ನು ಪೋಷಿಸಿದರೆ ರಾಜ್ಯದಲ್ಲಿ ಅದರ ನೇತೃತ್ವ ವಹಿಸಿಕೊಂಡಿದ್ದು ಸಿದ್ದರಾಮಯ್ಯ. ಸಮಾಜದಲ್ಲಿ ಅಸ್ಥಿರತೆ ಮೂಡಿಸಿ ತಮ್ಮ ವೈಯುಕ್ತಿಕ ಧಾರ್ಮಿಕ ಗುರಿಗಳನ್ನು ಹಿಂಸೆಯ ಮೂಲಕ ಪ್ರತಿಷ್ಠಾಪಿಸುವುದು ಈ ಜಿಹಾದಿಗಳ ಉದ್ದೇಶವಾಗಿತ್ತು. ಇಂತವರಿಗೂ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದೇಕೆ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಮತ್ತು ಜಿಹಾದಿ ಸಂಘಟನೆಗಳು ಒಂದೇ ನಾಣ್ಯದ ಎರಡು ಮುಖಗಳು.ಇಬ್ಬರದ್ದೂ ಒಂದೇ ಧ್ಯೇಯ, ಅದು ದೇಶವನ್ನು ತುಂಡರಿಸುವುದು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಮುಂದುವರೆದರೆ, ಧಾರ್ಮಿಕತೆಯ ಹೆಸರಿನಲ್ಲಿ ಜಿಹಾದಿ ಸಂಘಟನೆಗಳು ಕಾರ್ಯಾಚರಿಸುತ್ತಿದ್ದವು. ದೇಶ ತುಂಡರಿಸಲು ಎಷ್ಟೊಂದು ಮುಖವಾಡಗಳು! ಎಂದು ಬಿಜೆಪಿ ಹೇಳಿದೆ.