ವಡೋದರಾ, ಅ 04 (DaijiworldNews/MS): ಪಂಜಾಬ್ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಭಗವಂತ್ ಮಾನ್ ಅವರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸೆಲ್ಫಿ ಹಂಚಿಕೊಂಡ ಕೆಲವೇ ಗಂಟೆಗಳ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮಾಜಿ ವಕ್ತಾರ ಕಿಶನ್ ಸಿನ್ಹ್ ಸೋಲಂಕಿ ಅವರನ್ನು "ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ" ಅಮಾನತುಗೊಳಿಸಿದೆ.
ಕಿಶನ್ ಸಿನ್ಹಾ ಸೋಳಂಕಿ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಇದಕ್ಕೆ ಭಗವಂತ ಮಾನ್ ಶುಭಾಶಯ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಿಶನ್ ಸಿನ್ಹಾ ಸೋಳಂಕಿ, ಭಗವಂತ ಮಾನ್ ಜೊತೆ ತೆಗೆಸಿಕೊಂಡಿದ್ದ ಸೆಲ್ಫಿಯನ್ನು ಅಪ್ಲೋಡ್ ಮಾಡಿ ಧನ್ಯವಾದಗಳು ಎಂದು ತಿಳಿಸಿದ್ದರು.
ಈ ಫೋಟೋವನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ ಕೆಲ ಹೊತ್ತಿನಲ್ಲಿಯೇ ಕಿಶನ್ ಸಿನ್ಹಾ ಸೋಳಂಕಿಯವರನ್ನು ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಿಶನ್, ಆಮ್ ಆದ್ಮಿ ಪಕ್ಷದ ನಾಯಕರೊಂದಿಗೆ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದು, ಅವರು ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತುಗಳ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.