ಕೋಲ್ಕತ್ತಾ, ಅ 03 (DaijiworldNews/DB): ಕೋಲ್ಕತ್ತಾದ ದುರ್ಗಾ ಪೂಜೆಯ ಪೆಂಡಾಲ್ನಲ್ಲಿ ಮಹಿಷಾಸುರನ ಬದಲಾಗಿ ಕುರೂಪಗೊಳಿಸಲಾದ ಮಹಾತ್ಮಾ ಗಾಂಧೀಜಿಯವರಂತೆ ಕಾಣುವ ಆಕೃತಿಯನ್ನು ಇಟ್ಟಿರುವುದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಗಾಂಧಿ ಜಯಂತಿ ದಿನದಂದೇ ಇಂತಹ ಆಕೃತಿಯನ್ನಿಟ್ಟು ಮಹಾತ್ಮನಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಕೋಲ್ಕತ್ತಾದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಆಯೋಜಿಸಿದ್ದ ದುರ್ಗಾ ಪೂಜೆಯಲ್ಲಿ ಮಹಿಷಾಸುರನ ಬದಲಾಗಿ ಕನ್ನಡಕಧಾರಿ, ಧೋತಿ ತೊಟ್ಟ, ಬೋಳುತಲೆಯ ವ್ಯಕ್ತಿ ಕೋಲನ್ನು ಹಿಡಿದಿರುವ ಆಕೃತಿಯನ್ನು ಇಡಲಾಗಿದೆ. ಈ ಆಕೃತಿ ಮಹಾತ್ಮಾ ಗಾಂಧಿಯವರನ್ನು ಹೋಲುವಂತೆ ಕಾಣುತ್ತಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಮೇರೆಗೆ ಆಕೃತಿ ತೆರವು ಮಾಡುವಂತೆ ಪೊಲೀಸರು ಸೂಚಿಸಿದ್ದು, ಪೊಲೀಸರ ಸೂಚನೆ ಬಳಿಕ ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್, ಬಿಜೆಪಿ, ಸಿಪಿಐಎಂ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಘಟನೆಯನ್ನು ಖಂಡಿಸಿವೆ.
ಇನ್ನು ಘಟನೆ ಕಾಕತಾಳೀಯ. ಯಾರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನಮ್ಮದಲ್ಲ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಚೂರ್ ಗೋಸ್ವಾಮಿ ಹೇಳಿದ್ದಾರೆ. ಪೊಲೀಸರ ಸೂಚನೆಯಂತೆ ಆಕೃತಿ ಬದಲಾಯಿಸಲಾಗಿದೆ. ಮಹಿಷಾಸುರನ ವಿಗ್ರಹಕ್ಕೆ ಮೀಸೆ ಮತ್ತು ಕೂದಲು ಹಾಕಿದ್ದೇವೆ ಎಂದವರು ತಿಳಿಸಿರುವುದಾಗಿ ವರದಿಯಾಗಿದೆ.