ನವದೆಹಲಿ, ಅ 03 (DaijiworldNews/DB): ದೇವರ ಆದೇಶವಾಗಿದೆ ಎಂದು ಆರು ವರ್ಷದ ಬಾಲಕನ ರುಂಡ ತುಂಡರಿಸಿ ಹತ್ಯೆ ಮಾಡಿದ ಘಟನೆ ದಕ್ಷಿಣ ದೆಹಲಿಯ ಲೋಧಿ ಕಾಲೊನಿ ಬಳಿ ನಡೆದಿದೆ. ಘಟನೆ ಸಂಬಂಧ ಇಬ್ಬರು ಕಾರ್ಮಿಕರನ್ನು ಬಂಧಿಸಲಾಗಿದೆ.
ಕಾರ್ಮಿಕರಾದ ಬಿಹಾರ ಮೂಲದ ವಿಜಯ್ಕುಮಾರ್ ಮತ್ತು ಅಮನ್ ಕುಮಾರ್ ಬಂಧಿತರು. ಶನಿವಾರ ತಡರಾತ್ರಿ ಲೋಧಿ ಕಾಲೊನಿಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ಬಳಿ ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಬಾಲಕನ ತಲೆ ಕಡಿದು ಕೊಲೆ ಮಾಡಿದ್ದಾರೆ. ಮರುದಿನ ಮುಂಜಾನೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಾದಕ ದ್ರವ್ಯದ ಅಮಲಿನಲ್ಲಿ ಕಾರ್ಮಿಕರು ಕೃತ್ಯ ಎಸೆದಿದ್ದು, ವಿಚಾರಿಸಿದಾಗ ದೇವರ ಆದೇಶವಾಗಿದೆ ಎಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಮಿಕರು ಹಾಗೂ ಮೃತ ಬಾಲಕನ ಕುಟುಂಬ ಒಂದೇ ಕಡೆ ವಾಸವಾಗಿದ್ದು, ಪರಸ್ಪರ ಪರಿಚಯ ಇರುವವರೇ ಆಗಿದ್ದಾರೆ. ಮೃತ ಬಾಲಕನ ಮನೆಯವರೂ ಅಲ್ಲೇ ಕೆಲಸ ಮಾಡಿಕೊಂಡಿದ್ದರು. ಉತ್ತರ ಪ್ರದೇಶದ ಬರೇಲಿ ಮೂಲದ ಕುಟುಂಬದವರು ಆಗಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.