ಹುಬ್ಬಳ್ಳಿ, ಅ 02 (DaijiworldNews/SM): ದೇಶದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಮೊಟ್ಟೆಯಿಟ್ಟು, ಅದಕ್ಕೆ ದಿನವೂ ಕಾವು ಕೊಟ್ಟು, ನೂರಾರು ಮರಿ ಹುಟ್ಟು ಹಾಕಿ ರಕ್ತಬೀಜಾಸುರರಂತೆ ಬೆಳೆಸಿದೆ. ಅದನ್ನು ಎಷ್ಟೇ ತೊಡೆದು ಹಾಕಲು ಪ್ರಯತ್ನಿಸಿದರೂ ಕಾಂಗ್ರೆಸ್ ಕಸ(ಹುಲ್ಲು)ದಂತೆ ಬೆಳೆಯುತ್ತಿದೆ. ಭ್ರಷ್ಟಾಚಾರ ಹುಟ್ಟು ಹಾಕಿದ್ದೆ ಕಾಂಗ್ರೆಸ್. ಈಗ ನಕಲಿ ಗಾಂಧಿ ಪರಿವಾರ ಈ ಬಗ್ಗೆ ಮಾತನಾಡುತ್ತಿರುವುದೇ ದೊಡ್ಡ ದುರಂತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯತೆ ಇಲ್ಲ. ಸೋನಿಯಾ, ರಾಹುಲ್ ನೇತೃತ್ವದಲ್ಲಿ ಬೋಪೋರ್ಸ್ ಸೇರಿ ಹಳೆಯದು ಹೊರತುಪಡಿಸಿ 2004ರಿಂದ 2014ರವರೆಗೆ ಯುಪಿಎ ಸರ್ಕಾರವಿದ್ದಾಗ ಒಂದು ದಿನವೂ ಹಗರಣವಿಲ್ಲದೆ ಸರ್ಕಾರ ನಡೆದಿಲ್ಲ. ಇಂತಹ ಹಗರಣಗಳಿಂದಲೇ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಂಡಿತು. ವೀಸಾದಲ್ಲೂ ಹಣ ಪಡೆಯುತ್ತಿದ್ದ ಬಗ್ಗೆ ಗಂಭೀರ ಆರೋಪವಿದೆ.