ಮುಂಬೈ, ಅ 02 (DaijiworldNews/DB): ಮುಂಬೈಯ ವರ್ಲಿ ಪ್ರದೇಶದ ಸುಮಾರು 3000 ಮಂದಿ ಶಿವಸೇನೆ ಕಾರ್ಯಕರ್ತರು ಭಾನುವಾರ ಏಕನಾಥ ಶಿಂಧೆ ಬಣ್ಣಕ್ಕೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಉದ್ದವ್ ಠಾಕ್ರೆ ಅವರಿಗೆ ಬಹುದೊಡ್ಡ ಆಘಾತ ಎದುರಾಗಿದೆ.
ಆದಿತ್ಯ ಠಾಕ್ರೆ ಅವರು ವರ್ಲಿ ಪ್ರದೇಶದ ಶಾಸಕರಾಗಿದ್ದಾರೆ. ಪುತ್ರನ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಕಾರ್ಯಕರ್ತರು ವಿರೋಧಿ ಬಣಕ್ಕೆ ಸೇರ್ಪಡೆಯಾಗಿರುವುದು ಠಾಕ್ರೆ ಬಣಕ್ಕೆ ನಿರಾಶೆಯನ್ನುಂಟುಮಾಡಿದೆ ಎನ್ನಲಾಗಿದೆ.
ಶಿಂಧೆ ಮತ್ತು ಠಾಕ್ರೆ ಬಣಗಳು ಪ್ರತ್ಯೇಕ ದಸರಾ ರ್ಯಾಲಿ ನಡೆಸುವ ಸಲುವಾಗಿ ಬೃಹತ್ ಮುಂಬೈ ಮಹಾನಗರ ಪಾಲಿಕೆಗೆ ಮನವಿ ಪತ್ರ ಸಲ್ಲಿಸಿದ್ದವು. ಆದರೆ ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಇದಕ್ಕೆ ಪಾಲಿಕೆ ಅನುಮತಿ ನಿರಾಕರಿಸಿತ್ತು. ಆದರೆ ಪಾಲಿಕೆ ಅನುಮತಿ ನಿರಾಕರಿಸಿದ ಮರುದಿನವೇ ಠಾಕ್ರೆ ಬಣಕ್ಕೆ ಅಕ್ಟೋಬರ್ 2 ಮತ್ತು ಅಕ್ಟೋಬರ್ 6 ರ ನಡುವೆ ರ್ಯಾಲಿ ನಡೆಸಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿತ್ತು. ಇದಾದ ಮರು ದಿನವೇ ಮೂರು ಸಾವಿರ ಮಂದಿ ಶಿವಸೇನೆ ಕಾರ್ಯಕರ್ತರು ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದಾರೆಂದು ತಿಳಿದು ಬಂದಿದೆ.