ನವದೆಹಲಿ, ಅ 02 (DaijiworldNews/DB): ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ನಡುವೆ ಬಹಿರಂಗ ಚರ್ಚೆ ನಡೆಯಬೇಕು ಎಂದು ಅಧ್ಯಕ್ಷ ಚುನಾವಣೆಯ ಅಭ್ಯರ್ಥಿ, ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ವಿದೇಶಗಳಲ್ಲಿ ಅಭ್ಯರ್ಥಿಗಳ ನಡುವೆ ಚರ್ಚೆಗಳು ನಡೆಯುತ್ತವೆ. ಇದರಿಂದ ಭವಿಷ್ಯದ ಯೋಜನೆ, ಹೊಸ ಆಲೋಚನೆ, ಕಾರ್ಯಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲು ಸಾಧ್ಯವಿದೆ ಎಂದರು.
ಪಕ್ಷ ಸಂಘಟನೆ ಸಾಮರ್ಥ್ಯ ಮತ್ತು ಪಕ್ಷವನ್ನು ಉನ್ನತ ದಿಕ್ಕಿನಲ್ಲಿ ಕೊಂಡೊಯ್ಯಲು ಕೈಗೊಳ್ಳಬೇಕಾದ ಜವಾಬ್ದಾರಿಗಳ ಸ್ಪಷ್ಟ ಅರಿವು ನನಗಿದೆ. ಸ್ವಹಿತಾಸಕ್ತಿಯ ಉದ್ದೇಶ ನನಗಿಲ್ಲ. ಗಾಂಧಿ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಪಕ್ಷ ಬಲವರ್ಧನೆಯೇ ನನ್ನ ಕನಸು ಎಂದವರು ಪ್ರತಿಪಾದಿಸಿದರು.
ಸದ್ಯ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ಶಶಿ ತರೂರ್ ಮತ್ತು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಗಾಂಧಿ ಕುಟುಂಬದ ಆಯ್ಕೆಯಾಗಿ ಖರ್ಗೆ ಕಣಕ್ಕಿಳಿದಿದ್ದಾರೆ. ಅಕ್ಟೋಬರ್ 17ರಂದು ಎಐಸಿಸಿ ಅಧ್ಯಕ್ಷ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.