ನವದೆಹಲಿ, ಅ 02 (DaijiworldNews/DB): ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಭಾರತ ವಿಭಜನೆಯ ಪಿತಾಮಹ ಎಂದು ಕರೆದಿರುವ ಬಿಜೆಪಿ ವಿರುದ್ದ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಇತಿಹಾಸವನ್ನು ತಪ್ಪಾಗಿ ತಿಳಿಸುವುದೇ ಬಲಪಂಥೀಯರ ಕೆಲಸ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟ ಶನಿವಾರದಂದು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದ ಬಿಜೆಪಿ, ತೋಡೋ ಪಿತಾಮಹನ ಮರಿಮಗನಿಂದ ಜೋಡಿಸಲು ಸಾಧ್ಯವೆ?" ಎಂದು ವ್ಯಂಗ್ಯವಾಡಿತ್ತು. ಅಲ್ಲದೆ, ಭಾರತ್ ಜೋಡೋ ಯಾತ್ರೆಯ ನಿಜವಾದ ಅಜೆಂಡಾ ಭಾರತ ವಿಭಜನೆಯೇ ಆಗಿದೆ' ಎಂದು ಜಾಹೀರಾತು ಮುಖಾಂತರ ಯಾತ್ರೆಯನ್ನು ಅಣಕಿಸಿತ್ತು. ಇದರಿಂದ ಕೆರಳಿದ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರದ ಅಧ್ಯಕ್ಷ ಪವನ್ ಖೇರಾ ಸುದ್ದಿಗಾರರೊಂದಿಗೆ ಮಾತನಾಡಿ, ಇತಿಹಾಸ ಬರೆಯಲು ಬಿಜೆಪಿಗರಿಂದ ಸಾಧ್ಯವಾಗಿಲ್ಲ. ಅದಕ್ಕಾಗಿ ತಪ್ಪಾಗಿ ಅದನ್ನು ತಿಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಿಗೆ ಇತಿಹಾಸ ಪಾಠ ಕಲಿಸಲು ಬಿಜೆಪಿ ಹೊರಟಿದೆ ಎಂದು ವ್ಯಂಗ್ಯವಾಡಿದ್ದಾರೆ. ಪ್ರಾಂತ್ಯಗಳನ್ನು ಒಗ್ಗೂಡಿಸಿ ಏಕ ರಾಷ್ಟ್ರವನ್ನಾಗಿ ಮಾಡಿದ್ದು ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಭಾಗವಹಿಸಿದೆಯೇ? ಆ ಸಂಘಟನೆಯ ಯಾವ ನಾಯಕನಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಮೃತಪಟ್ಟ ಇತಿಹಾಸ ಇದೆಯೇ? ಇಂತಹವರು ಕಾಂಗ್ರೆಸ್ಗೆ ಇತಿಹಾಸ ಪಾಠ ಮಾಡಲು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಜವಾಹರಲಾಲ್ ನೆಹರು ಮತ್ತು ರಾಹುಲ್ ಗಾಂಧಿ ಅವರ ಭಾವಚಿತ್ರಗಳ ಮಧ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ವಿಭಜಿಸುವ ನಕ್ಷೆ ಹಾಕಿ ಬಿಜೆಪಿ ಜಾಹೀರಾತು ನೀಡಿತ್ತು. ತನ್ನ ಅಧಿಕಾರದ ಹಪಹಪಿಗೆ ದೇಶವಾಸಿಗಳ ರಕ್ತಹರಿಸಿದ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ?", ದೇಶ ವಿಭಜನೆಯ ಪರಂಪರೆಯಲ್ಲಿ ಬಂದವರಿಂದ ದೇಶ ಒಡೆಯುವುದನ್ನು ಬೆಂಬಲಿಸಿದವರಿಂದ ಭಾರತದ ಐಕ್ಯತೆ ಸಾಧ್ಯವೇ? ಎಂಬ ಪ್ರಶ್ನೆಗಳನ್ನು ಅದೇ ಜಾಹೀರಾತಿನಲ್ಲಿ ಕೇಳಲಾಗಿದೆ. ಜೊತೆಗೆ 'ಭಾರತ್ ಜೋಡೋ ಯಾತ್ರೆಯ ನಿಜವಾದ ಅಜೆಂಡಾ ಭಾರತ ವಿಭಜನೆಯೇ ಆಗಿದೆ' ಎಂದು ಬಿಜೆಪಿ ಆರೋಪಿಸಿತ್ತು.