ಲಕ್ನೋ, ಅ 01 (DaijiworldNews/DB): ದೇಶದ ಜನರು ಈಗಾಗಲೇ 5ಜಿಗಳನ್ನು ಅನುಭವಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ಸೇವೆಗೆ ಚಾಲನೆ ನೀಡಿದ ಬಳಿಕ ಟ್ವೀಟ್ ಮಾಡಿರುವ ಅವರು, ಗರೀಬಿ (ಬಡತನ), ಘೋಟಾಲಾ (ಹಗರಣ), ಘಪ್ಲಾ (ವಂಚನೆ), ಘಲ್ಮೇಲ್ (ಕಲಬೆರಕೆ) ಗೋರಖಧಂಡ (ಅನೈತಿಕ ಆಚರಣೆಗಳು) ಎಂಬ 5ಜಿಗಳನ್ನು ದೇಶದ ಜನರು ಈಗಾಗಲೇ ನೋಡಿದ್ದಾರೆ. ಅದನ್ನು ಅನುಭವಿಸಿ ಜನರಿಗೆ ಸಾಕಾಗಿದೆ ಎಂದಿದ್ದಾರೆ.
ಮೊಬೈಲ್ ಫೋನ್ಗಳಲ್ಲಿ ಅಲ್ಟ್ರಾ-ಹೈ-ಸ್ಪೀಡ್ ಇಂಟರ್ನೆಟ್ ಒದಗಿಸುವ ಭರವಸೆ ನೀಡುವ 5ಜಿ ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಸಮ್ಮೇಳನದಲ್ಲಿ ಚಾಲನೆ ನೀಡಿದ್ದರು. ಬಳಿಕ ಮಾತನಾಡಿದ ಅವರು, ಇದೊಂದು ನವ ಯುಗದ ಆರಂಭಕ್ಕೆ ಸೂಚನೆ. ಅವಕಾಶಗಳ ಹೆಬ್ಬಾಗಿಲನ್ನೇ ಈ ಯುಗ ತೆರೆಯಲಿದೆ ಎಂದಿದ್ದರು. ಸಾಧನಗಳ ಬೆಲೆ, ಡಿಜಿಟಲ್ ಸಂಪರ್ಕ, ಡೇಟಾ ವೆಚ್ಚ ಮತ್ತು ಡಿಜಿಟಲ್-ಮೊದಲ ವಿಧಾನ ಎಂಬ ನಾಲ್ಕು ಸ್ಥಂಭಗಳ ಮೂಲಕ ಡಿಜಿಟಲ್ ಇಂಡಿಯಾದ ಸಾಕಾರಕ್ಕಾಗಿ ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದವರು ಪ್ರತಿಪಾದಿಸಿದ್ದರು.