ನವದೆಹಲಿ, ಅ 01 (DaijiworldNews/DB): ಎಐಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಲು ಜಾರ್ಖಂಡ್ನ ಮಾಜಿ ಸಚಿವ ಕೆ.ಎನ್. ತ್ರಿಪಾಠಿ ಸಲ್ಲಿಸಿದ್ದ ನಾಮಪತ್ರ ಶನಿವಾರ ತಿರಸ್ಕೃತಗೊಂಡಿದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರು ಅವರ ನಡುವೆ ಅಂತಿಮ ಸ್ಪರ್ಧೆ ನಡೆಯಲಿದೆ.
ತ್ರಿಪಾಠಿ ಅವರ ಪ್ರೊಪೋಸರ್ವೊಬ್ಬರ ಸಹಿ ಹೊಂದಿಕೆಯಾಗದ ಕಾರಣ ಮತ್ತುಇನ್ನೊಬ್ಬ ಪ್ರೊಪೋಸರ್ ಸಹಿಯನ್ನು ಪುನರಾವರ್ತನೆ ಮಾಡಿದ್ದರಿಂದಾಗಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ತಿಳಿಸಿದರು.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ ಮೂವರೂ ನಾಮಪತ್ರ ಸಲ್ಲಿಸಿದ್ದರು. ಒಟ್ಟು 20 ನಮೂನೆಗಳನ್ನು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಸ್ವೀಕರಿಸಲಾಗಿದ್ದು, ಈ ಪೈಕಿ ನಾಲ್ಕನ್ನು ತಿರಸ್ಕರಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ 14, ಶಶಿ ತರೂರ್ 5 ಮತ್ತು ಕೆ.ಎನ್. ತ್ರಿಪಾಠಿ 1 ಅರ್ಜಿ ಸಲ್ಲಿಸಿದ್ದರು ಎಂದವರು ಮಾಹಿತಿ ನೀಡಿದರು.